H Cross, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಎಚ್. ಕ್ರಾಸ್ ನಲ್ಲಿ ಬುಧವಾರ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಚಾಲನೆ ನೀಡಿದರು.
ಬೆಳಗ್ಗಿನಂದೇ ಪ್ರಾರಂಭವಾದ ವಿವಿಧ ಪೂಜಾ ವಿಧಾನಗಳಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ಗರುಡೋತ್ಸವ, ಶಯನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಭಕ್ತರ ಮನಗಳನ್ನು ಆಕರ್ಷಿಸಿದವು.
ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ರಥೋತ್ಸವದಂತಹ ಧಾರ್ಮಿಕ ಆಚರಣೆ ನಡೆಸುವ ಮೂಲಕ ಗ್ರಾಮೀಣರಲ್ಲಿ ಒಗ್ಗಟ್ಟು ಮೂಡುತ್ತದೆ. ಕಾಲಕಾಲಕ್ಕೆ ಮಳೆ ಬೆಳೆಯಾಗಿ ನಾಡು ಸುಭಿಕ್ಷವಾಗಿರಲೆಂದು ಎಲ್ಲರೂ ಪ್ರಾಥಿಸಿದ್ದೇವೆ” ಎಂದು ಹೇಳಿದರು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು ಹಾಗೂ ಇತರ ಪ್ರಸಾದಗಳನ್ನು ಸಮರ್ಪಣೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಪ್ರಾರ್ಥನೆ ಮಾಡಿದರು. ದೇವರ ಅಲಂಕಾರ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.
ಮೇಳದ ಅಂಗವಾಗಿ ಅನೇಕ ಅಂಗಡಿಗಳು ನೆಲೆಯಾಗಿದ್ದು, ಬತ್ತಾಸು, ಬುರುಗು, ಕಡ್ಲೆಬೀಜ ಮುಂತಾದ ತಿನಿಸುಗಳು ಜನರ ಮೆಚ್ಚುಗೆಗೆ ಪಾತ್ರವಾದವು.
ದೇವಾಲಯ ಸಮಿತಿ ಅಧ್ಯಕ್ಷ ಅಯ್ಯಪ್ಪಣ್ಣ, ಕಾಳನಾಯಕನಹಳ್ಳಿ ಭೀಮೇಶ್, ಪ್ರಧಾನ ಅರ್ಚಕ ಪದ್ಮನಾಭಚಾರ್, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಚನ್ನರಾಯಪ್ಪ, ಬಾಬು, ರಾಮಕೃಷ್ಣ, ಹಾಗೂ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
For Daily Updates WhatsApp ‘HI’ to 7406303366









