
Jangamakote, Sidlaghatta : ಜಂಗಮಕೋಟೆಯ KIADB ಯೋಜನೆಯನ್ನು ಕೈ ಬಿಡುವಂತೆ ಮುಂದಿನ ತಿಂಗಳು ೫ನೇ ತಾರೀಕು ವಿಧಾನಸೌಧಕ್ಕೆ ಚಲೋ ಚಳುವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್ ಅವರು ರೈತರಲ್ಲಿ ಮನವಿ ಮಾಡಿದರು.
ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ ಕೆಐಎಡಿಬಿಯು ಕೈಗಾರಿಕೆ ಪ್ರದೇಶ ಅಭಿವೃದ್ದಿಗೆ ಮುಂದಾಗಿದ್ದು ಈ ಯೋಜನೆಯನ್ನು ಕೈ ಬಿಡುವಂತೆ ಹಸಿರು ಸೇನೆ ರೈತ ಸಂಘವು ಕಳೆದ ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದು ಸರಕಾರದಿಂದ ಯಾವುದೆ ಪ್ರತಿಕ್ರಿಯೆ ಸಿಗದ ಹಿನ್ನಲೆ ತಾರ್ಕಿಕ ಅಂತ್ಯಕ್ಕಾಗಿ ಜೂನ್ 5 ರಂದು ವಿಧಾನಸೌಧ ಚಲೋ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಹಿನ್ನಲೆಯಲ್ಲಿ ಇಡೀ ಜಿಲ್ಲೆಯ ಎಲ್ಲ ಗ್ರಾಮಗಳಲ್ಲೂ ರೈತ ಸಂಘದ ಪದಾಧಿಕಾರಿಗಳು ಕರ ಪತ್ರ ಹಂಚಿ ಬೈಕ್ ಮೂಲಕ ವಿಧಾನಸೌಧ ಚಲೋಗೆ ಜನ ಜಾಗೃತಿ ಮೂಡಿಸಲಾಗುತ್ತಿದೆ.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾಡಳಿತ ಭವನದ ಆವರಣದಲ್ಲಿ ಕಳೆದ 72 ದಿನಗಳಿಂದಲೂ ಅನಿರ್ಧಿಷ್ಟ ಕಾಲದ ಧರಣಿ ನಡೆಸುತ್ತಿದ್ದರೂ ಸರಕಾರವು ಯಾವುದೆ ರೀತಿಯಲ್ಲಿ ಸ್ಪಂಧಿಸಿಲ್ಲ ಎಂದು ದೂರಿದರು.
ಹಾಗಾಗಿ ಸರಕಾರದ ಮೇಲೆ ಒತ್ತಡ ತಂದು ಜಂಗಮಕೋಟೆ ಭಾಗದ ಕೆಐಎಡಿಬಿ ಯೋಜನೆಯನ್ನು ಕೈ ಬಿಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಬೆಂಬಲದೊAದಿಗೆ ಅನಿರ್ಧಿಷ್ಟ ಧರಣಿಯ 81ನೇ ದಿನ ಜೂನ್ 5 ರಂದು ಧರಣಿ ಸ್ಥಳದಿಂದ ಬೆಂಗಳೂರು ವಿಧಾನಸೌಧಕ್ಕೆ ಬೈಕ್ಗಳ ಮೂಲಕ ಚಲೋ ನಡೆಯಲಿದೆ ಎಂದರು.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆಗಳ ರೈತರು, ದಸಂಸ, ಮಾನವ ಹಕ್ಕುಗಳ ಕಮಿಟಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಸಾಮಾಜಿಕ ಕಾರ್ಯಕರ್ತರ ವೇದಿಕೆ, ರಕ್ಷಣಾ ವೇದಿಕೆ ಸೇರಿ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿವೆ.
10 ಸಾವಿರಕ್ಕೂ ಹೆಚ್ಚು ಬೈಕ್ಗಳಲ್ಲಿ ವಿಧಾನಸೌಧ ಚಲೋ ನಡೆಸಿ ಜಂಗಮಕೋಟೆ ಕೆಐಎಡಿಬಿ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರೈತರಲ್ಲಿ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ ಮಾತನಾಡಿ, ಜಂಗಮಕೋಟೆ ಭಾಗದಲ್ಲಿ ಫಲವತ್ತಾದ ಭೂಮಿ ಹೆಚ್ಚಿನ ಪ್ರಮಾಣದಲ್ಲಿದೆ. ಹಾಗಾಗಿ ಅಲ್ಲಿ ಕೆಐಎಡಿಬಿ ಯೋಜನೆಯನ್ನ ಕೈ ಬಿಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಕಳೆದ 72 ದಿನಗಳಿಂದಲೂ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದೇವೆ.
ಆದರೆ ಸರಕಾರ ಸೂಕ್ತವಾಗಿ ಸ್ಪಂಧಿಸಿಲ್ಲ. ಹಾಗಾಗಿ ಈ ಧರಣಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು, ಜಂಗಮಕೋಟೆ ಭಾಗದ ಕೈ ಕೆಐಎಡಿಬಿ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟವನ್ನು ಬಿಡುವುದಿಲ್ಲ ಎಂದರು.
ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಮಂಜುನಾಥ್, ಬೂದಾಳ ಶ್ರೀನಿವಾಸ್, ಅಬ್ಲೂಡು ಕೆಂಪಣ್ಣ, ಆರ್.ಮೋಹನ್, ರಾಮಕೃಷ್ಣ, ಕೃಷ್ಣಪ್ಪ ಇನ್ನಿತರರು ಹಾಜರಿದ್ದರು.