Sidlaghatta : ಕಲ್ಯಾಣಿ, ಕೆರೆಕಟ್ಟೆಗಳನ್ನು ನಿರ್ಲಕ್ಷಿಸಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ. ಕೆರೆ, ಬಾವಿ, ಕಲ್ಯಾಣಿಗಳನ್ನು ರಕ್ಷಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ NSS ಸಂಯೋಜನಾಧಿಕಾರಿ ಡಾ.ಎಚ್.ಜಿ. ಗೋವಿಂದ ಗೌಡ ತಿಳಿಸಿದರು.
ಬೆಂಗಳೂರು ಎನ್.ಎಸ್ಎಸ್ ಪ್ರಾದೇಶಿಕ ಕೇಂದ್ರ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಯಲಹಂಕ ಉಪನಗರದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಪುರಾತನ ಕಾಲದ ಶಾಮಣ್ಣ ಬಾವಿ ಕಲ್ಯಾಣಿಯಲ್ಲಿನ ಗಿಡ, ಹೂಳು ಹಾಗೂ ಕಲ್ಲು ಮಣ್ಣುಗಳನ್ನು ಸ್ವಚ್ಛ ಮತ್ತು ಪುನಶ್ಚೇತನ ಅಭಿಯಾನವನ್ನು ಒಂದು ವಾರದ ಕಾಲ ನಡೆಸಿ, ಸ್ವಚ್ಛತೆಯಾದ ನಂತರ ಅವರು ಮಾತನಾಡಿದರು.
![](https://www.sidlaghatta.com/wp-content/uploads/2023/10/09OctSd02c-1024x683.jpg)
ಪುರಾತನ ಕಾಲದಲ್ಲಿ ನಿರ್ಮಿಸುತ್ತಿದ್ದ ಕಲ್ಯಾಣಿ, ಕೆರೆಕಟ್ಟೆಗಳು, ಕುಡಿಯುವ ನೀರಿನ ಸಾಮೂಹಿಕ ಜಲಮೂಲವಾಗುವ ಜೊತೆಗೆ, ಮಳೆ ನೀರು ಸಂಗ್ರಹ ಮಾಡಿ, ಅಂತರ್ಜಲ ಹೆಚ್ಚಿಸಲು ವೈಜ್ಞಾನಿಕವಾಗಿ ನಿರ್ಮಾಣವಾಗಿರುತ್ತಿದ್ದವು. ಆದರೆ ನಾವು ಇವುಗಳನ್ನು ನಿರ್ಲಕ್ಷಿಸಿರುವ ಕಾರಣ ಅಂತರ್ಜಲಮಟ್ಟ ಕುಸಿಯುತ್ತಿದೆ. ಆದ್ದರಿಂದ ಎನ್.ಎಸ್.ಎಸ್ ಸ್ವಯಂಸೇವಕರು ಮರು ಜೀವವನ್ನು ನೀಡಿದ್ದಾರೆ. ಪುನಶ್ಚೇತನ ಮಾಡುವ ಕಾರ್ಯವನ್ನು ಮಾಡಿದ್ದೇವೆ ಎಂದರು.
![NSS Shamanna Bavi Cleanlng](https://www.sidlaghatta.com/wp-content/uploads/2023/10/09OctSd02b-1024x683.jpg)
ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ನವೀನ್ ಕುಮಾರ್ ಮಾತನಾಡಿ, ನಮ್ಮ ಎನ್.ಎಸ್.ಎಸ್ ತಂಡ, ಕಲ್ಯಾಣಿಗಳನ್ನು ಶ್ರಮದಾನಗಳ ಮೂಲಕ ಸ್ವಚ್ಛಗೊಳಿಸಿ ಪುನಶ್ಚೇತನ ನೀಡುವ ಕಾರ್ಯಕ್ಕೆ ಮುಂದಾಗಿದೆ. ಇದೇ ರೀತಿ ತಿಂಗಳಿಗೆ ಒಂದು ಪುರಾತನ ಕಾಲದ ದೇವಾಲಯ ಮತ್ತು ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಪುನಶ್ಚೇತನ ಗೊಳಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುನಿಲ್, ಮೋಹನ್, ಶಶಾಂಕ್, ಪ್ರಭಾಕರ್, ಜನಾರ್ಧನ್ ಹಾಜರಿದ್ದರು.