Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಮಾರ್ಗವಾಗಿ ಬಾಗೇಪಲ್ಲಿ-ಚಿಂತಾಮಣಿ ಸಂಪರ್ಕ ಕಲ್ಪಿಸುವ NH-5 ರಲ್ಲಿ ಇರುವ ಕುದುಪಕುಂಟೆ ಗ್ರಾಮದಿಂದ ಕೊಂಡಪ್ಪಗಾರಹಳ್ಳಿಯವರೆಗಿನ ಇರುವ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆ ಕಾಮಗಾರಿಗೆ ಆದೇಶವಾಗಿ ನಾಲ್ಕು ವರ್ಷವಾದರೂ ಕಾಮಗಾರಿ ಮಾಡದ ಗುತ್ತಿಗೆದಾರ ಹಾಗು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ ಕ್ರಮ ಖಂಡನೀಯ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಹೇಳಿದರು.
ತಾಲ್ಲೂಕಿನ ಕುದುಪಕುಂಟೆ ಗ್ರಾಮದಿಂದ ಕೊಂಡಪ್ಪಗಾರಹಳ್ಳಿಯವರೆಗಿನ ರಸ್ತೆ ಕಾಮಗಾರಿ ತ್ವರಿತವಾಗಿ ಶುರುಮಾಡುವಂತೆ ಒತ್ತಾಯಿಸಿ ಕುದುಪಕುಂಟೆ ಗ್ರಾಮದ ಬಳಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಸ್ತೆ ಕಾಮಗಾರಿ ಮಾಡಲು ಆದೇಶವಾಗಿ ನಾಲ್ಕು ವರ್ಷ ಕಳೆದರೂ ಈವರೆಗೂ ರಸ್ತೆ ಕಾಮಗಾರಿ ಮಾಡದ ಗುತ್ತಿಗೆದಾರ ಹಾಗೂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷದಿಂದ ಹಲವರು ಮೃತಪಟ್ಟಿದ್ದಾರೆ. ಈ ಹಿಂದೆ ಇದೇ ರಸ್ತೆಯಲ್ಲಿ ರೈತನೋರ್ವ ಅಪಘಾತದಲ್ಲಿ ಮೃತಪಟ್ಟಾಗ ರೈತನಿಗೆ ಪರಿಹಾರ ನೀಡುವುದಾಗಿ ಹೇಳಿದ್ದ ಗುತ್ತಿಗೆದಾರ ಈವರೆಗೂ ಯಾವುದೇ ಪರಿಹಾರ ನೀಡಿಲ್ಲ. ಸಾಲದ್ದಕ್ಕೆ ನಾಲ್ಕೈದು ಮಂದಿ ರಸ್ತೆ ಅಪಘಾತದಲ್ಲಿ ಕೈ ಕಾಲು ಮುರಿದುಕೊಂಡಿದ್ದಾರೆ. ಇಚ್ಚಾಶಕ್ತಿಯಿಲ್ಲದ ಕ್ಷೇತ್ರದ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಜನರ ಪ್ರಾಣದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಕೂಡಲೇ ಹದಗೆಟ್ಟಿರುವ ರಸ್ತೆ ದುರಸ್ತಿ ಮಾಡಲು ಮುಂದಾಗಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ರಾಜಾರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್ಕುಮಾರ್, ಪ್ರದಾನ ಕಾರ್ಯದರ್ಶಿ ವೆಂಕಟರೆಡ್ಡಿ, ತಾಲ್ಲೂಕು ಉಪಾಧ್ಯಕ್ಷ ಶಂಕರನಾರಾಯಣ, ಪದಾಧಿಕಾರಿಗಳಾದ ಮಾರುತಿ, ಶ್ರೀಧರ್, ಚನ್ನೇಗೌಡ, ಯುವಶಕ್ತಿ ಸಂಘಟನೆಯ ವಿಜಯಭಾವರೆಡ್ಡಿ, ಸ್ವಾಭಿಮಾನಿ ಸಮಾನ ಮನಸ್ಕರ ವೇಧಿಕೆಯ ವಿಸ್ಡಂ ನಾಗರಾಜ್, ಸ್ಥಳೀಯ ಮುಖಂಡರು ಹಾಜರಿದ್ದರು.
ಗುತ್ತಿಗೆದಾರನಿಂದ ಮುಚ್ಚಳಿಕೆ
ಪ್ರತಿಭಟನೆ ಸ್ಥಳಕ್ಕೆ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರ, (ಶ್ರೀ ಸತ್ಯ ಗಣಪತಿ ಕನ್ಸ್ಟ್ರಕ್ಷನ್ ವ್ಯವಸ್ಥಾಪಕ ಪಾಲುದಾರ) ಪ್ರದೀಪ್ ರೆಡ್ಡಿ ಆಗಮಿಸಿ ಮುಂಬರುವ ಫೆಬ್ರವರಿ ತಿಂಗಳ ಅಂತ್ಯದೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇಲ್ಲವಾದಲ್ಲಿ ತಾವುಗಳು ನನ್ನ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದು ಎಂದು ಸ್ವ ಇಚ್ಚೆಯಿಂದ ಪ್ರತಿಭಟನಾಕಾರರಿಗೆ ಮುಚ್ಚಳಿಕೆ ಬರೆದುಕೊಟ್ಟರು.