Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಜಿಲ್ಲಾ ಮಟ್ಟದ ನಿಪುಣ, ತೃತೀಯ ಸೋಪಾನ ಪರೀಕ್ಷಾ ಶಿಬಿರ ಮತ್ತು ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಾಲಿನಲ್ಲಿ ರಾಜ್ಯಪಾಲರ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಅವರಿಗಾಗಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಹಾಗೂ ಜಿಲ್ಲಾ ಪುರಸ್ಕಾರಕ್ಕಾಗಿ ತೃತೀಯ ಸೋಪಾನ ಪರೀಕ್ಷಾ ಶಿಬಿರವನ್ನು ನಡೆಸಲಾಯಿತು.
ತೃತೀಯ ಸೋಪಾನ ಶಿಬಿರದಲ್ಲಿ ಉತ್ತೀರ್ಣ ಗೊಳ್ಳುವ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಮುಂದಿನ ಸಾಲಿಗೆ ರಾಜ್ಯಪಾಲರ ಪ್ರಮಾಣ ಪತ್ರಕ್ಕಾಗಿ ರಾಜ್ಯ ಪುರಸ್ಕಾರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆಯಲಿದ್ದಾರೆ.
ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಸಿ.ಬಿ ಪ್ರಕಾಶ್ ಮಾತನಾಡಿ, ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಕೇವಲ ಸೇವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರದೆ ವಿದ್ಯಾರ್ಥಿಗಳ ಪ್ರಗತಿಪರ ಬೆಳವಣಿಗೆಗೆ ಹಾಗೂ ಕೌಶಲ್ಯಯುಕ್ತ ಜೀವನ ನಡೆಸಲು ಅನೇಕ ಹಲವಾರು ಅಂಶಗಳನ್ನು ಒಳಗೊಂಡಿದೆ. ಅಪಘಾತದ ಸಮಯದಲ್ಲಿ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ತರಬೇತಿ, ಸ್ಕೌಟಿಂಗ್ ನ ಇತಿಹಾಸ, ಸಮಾಜದೊಂದಿಗೆ ವಿದ್ಯಾರ್ಥಿಗಳ ಸಂವಹನ, ಸ್ವಯಂಶಿಸ್ತು ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತಿದಿನ ಶಾಲೆಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು, ಈ ಅಂಶಗಳನ್ನು ಪರೀಕ್ಷಾ ಶಿಬಿರದಲ್ಲಿ ಪರೀಕ್ಷಿಸಲಾಗುವುದು ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಜಗತ್ತಿನ 216 ದೇಶಗಳಲ್ಲಿ ಒಂದೇ ನಿಯಮ ಮತ್ತು ತತ್ವಗಳ ಆಧಾರದಲ್ಲಿ ನಡೆಯುತ್ತಿರುವ ಏಕ ಮಾತ್ರ ಸಮವಸ್ತ್ರಧಾರಿ ಸಂಸ್ಥೆಯಾಗಿದ್ದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಮನವಿ ಮಾಡಿದರು.
ಈ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ 30 ರೋವರ್ಸ್ ಮತ್ತು ರೇಂಜರ್ಸ್ ಗಳು, 140 ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, 18 ಶಿಕ್ಷಕರು, ಎಲ್ಲ ತಾಲ್ಲೂಕು ಸಂಸ್ಥೆಗಳ ಕಾರ್ಯದರ್ಶಿಗಳು, ಪದಾಧಿಕಾರಿಗಳು ಸೇರಿದಂತೆ ಸುಮಾರು 200 ಜನ ಭಾಗವಹಿಸಿದ್ದರು.
ಶಿಬಿರದಲ್ಲಿ ಪ್ರಥಮ ದರ್ಜೆ ಕಾಲೇಜಿನ ರೋವರ್ ಲೀಡರ್ ರವಿಕುಮಾರ್, ಚಿಕ್ಕಬಳ್ಳಾಪುರ ತಾಲ್ಲೂಕು ಕಾರ್ಯದರ್ಶಿ ನಾರಾಯಣಸ್ವಾಮಿ, ಗೌರಿಬಿದನೂರು ತಾಲ್ಲೂಕು ಕಾರ್ಯದರ್ಶಿ ಗಿರಿಧರ್, ಶಿಡ್ಲಘಟ್ಟ ತಾಲ್ಲೂಕು ಕಾರ್ಯದರ್ಶಿ ಮುನಿರಾಜು, ಸಹಕಾರ್ಯದರ್ಶಿ ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ನರಸಿಂಹಮೂರ್ತಿ, ಜಿಲ್ಲಾ ಸಮಿತಿ ಸದಸ್ಯೆ ಕೀರ್ತಿ ಬಸಪ್ಪ ಲಗಳಿ, ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ ಉಮಾ, ಜಿಲ್ಲಾ ತರಬೇತಿ ಆಯುಕ್ತರುಗಳಾದ ಲಕ್ಷ್ಮಿ ಹೊನ್ನಪ್ಪ ನಾಯ್ಕ , ರಾಮಪ್ರಸಾದ್ ಶಿಕ್ಷಕರಾದ ರಾಕೇಶ್, ಅಮಲಾ ,ಗಂಗರತ್ನಮ್ಮ, ನರಸಿಂಹಮೂರ್ತಿ ಹಾಜರಿದ್ದರು.