
Sidlaghatta : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಸೋಮವಾರ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಗರ್ಭಿಣಿಯರು, ಬಾಣಂತಿಯರು ಹಾಗೂ ಒಳರೋಗಿಗಳೊಂದಿಗೆ ಸಂವಹನ ನಡೆಸಿ ಆಸ್ಪತ್ರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ಈ ಭೇಟಿಗೆ ಮುನ್ನ ಅವರು ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ, ಅಚಾನಕ್ ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯರು ಹಾಗೂ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದರು.
ಡಾ. ಚೌಧರಿ, ಕಳೆದ ಕೆಲ ವರ್ಷಗಳ ಹಿಂದಿನ ತಥ್ಯಗಳೊಂದಿಗೆ ಹೋಲಿಕೆ ಮಾಡಿ, ಈಚೆಗೆ ಆಸ್ಪತ್ರೆಯಲ್ಲಿ ಹೆರಿಗೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಇಲ್ಲಿ ಯಾವುದೇ ಲೋಪವಿಲ್ಲದೆ ಇಷ್ಟು ಕಡಿಮೆ ಪ್ರಮಾಣದಲ್ಲಿ ಹೆರಿಗೆಗಳು ಆಗುತ್ತಿರುವುದು ನಂಬಲಸಾಧ್ಯ. ನಿರ್ಲಕ್ಷ್ಯವೋ, ಜನರ ನಂಬಿಕೆಯ ಕೊರತೆಯೋ, ಅಥವಾ ವ್ಯವಸ್ಥೆಯ ದೋಷವೋ ಕಾರಣವಾಗಬಹುದು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಆಸ್ಪತ್ರೆಯ ವೈದ್ಯರನ್ನು ತಕ್ಷಣವೇ ಕರೆಯಿಸಿ, ಇತ್ತೀಚಿನ ಹೆರಿಗೆ ಪ್ರಕರಣಗಳ ಕುರಿತ ವಿಸ್ತೃತ ವರದಿ ನೀಡುವಂತೆ ಸೂಚನೆ ನೀಡಿದರು. “ಸಾರ್ವಜನಿಕರು ವಿಶೇಷವಾಗಿ ಬಡವರು ಈ ಆಸ್ಪತ್ರೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂಥ ಸಂದರ್ಭದಲ್ಲೂ ಇದು ಹೇಗೆ ಇಳಿಯಬಹುದು ಎಂಬ ಪ್ರಶ್ನೆ ಮೂಡುತ್ತದೆ,” ಎಂದು ಹೇಳಿದರು.
ಆಸ್ಪತ್ರೆಯ ಒಳರೋಗಿಗಳು, ಗರ್ಭಿಣಿಯರು ಹಾಗೂ ಬಾಣಂತಿಯರೊಂದಿಗೆ ನೇರವಾಗಿ ಮಾತನಾಡಿದ ಡಾ. ಚೌಧರಿ, ಚಿಕಿತ್ಸಾ ಕ್ರಮ, ಸಿಬ್ಬಂದಿಯ ವರ್ತನೆ, ಔಷಧಿ ಲಭ್ಯತೆ, ಹಣದ ಬೇಡಿಕೆ ಇತ್ಯಾದಿಗಳ ಬಗ್ಗೆ ಪ್ರತಿಕ್ರಿಯೆಗಳನ್ನು ಕಲೆಹಾಕಿದರು. ಕೆಲವು ರೋಗಿಗಳು ಆಸ್ಪತ್ರೆಯಲ್ಲಿನ ವ್ಯವಸ್ಥಾ ವೈಫಲ್ಯಗಳ ಬಗ್ಗೆ ದೂರು ನೀಡಿದ್ದು, ಅವುಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್. ಸ್ವಾಮಿ, ತಾ.ಪಂ ಇಓ ಆರ್. ಹೇಮಾವತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ವಿದ್ಯಾ ವಸ್ತ್ರದ್, ದಲಿತ ಮುಖಂಡರು ಕುಂದಲಗುರ್ಕಿ ಮುನಿಂದ್ರ, ಎನ್.ಎ. ವೆಂಕಟೇಶ್, ಮಳ್ಳೂರು ಅಶೋಕ್ ಮತ್ತು ಇತರರು ಉಪಸ್ಥಿತರಿದ್ದರು.