Sugaturu, Sidlaghatta : ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ತಮ್ಮ ಬೋಧನೆಗೆ ಡಿಜಿಟಲ್ ಉಪಕರಣಗಳು, ವಿಧಾನಗಳು ಮತ್ತು ಕೃತಕಬುದ್ಧಿಮತ್ತೆಯ ಮಾಧ್ಯಮಗಳನ್ನು ಬಳಸಿಕೊಳ್ಳುವುದು ಸೂಕ್ತ. ವಿದ್ಯಾರ್ಥಿಗಳನ್ನೂ ಕಂಪ್ಯೂಟರ್ ಬಳಕೆ, ಸುಲಭ ಮತ್ತು ಆಕರ್ಷಣೀಯವಾಗಿ ಆಸಕ್ತಿದಾಯಕವಾಗಿ ಕಲಿಯುವ ಮತ್ತು ಧಾರಣೆ ಮಾಡಿಕೊಳ್ಳುವ ವಿಧಾನಗಳನ್ನು ಬೋಧಕರು ಕಲಿಸಿಕೊಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ, ಉಪನಿರ್ದೇಶಕ ಎಂ.ಮುನಿಕೆಂಪೇಗೌಡ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೇಟಿ ನೀಡಿ ಕಲಿಕಾಪ್ರಗತಿ ಪರಿಶೀಲಿಸಿದ ವೇಳೆ ಶಾಲೆಯ ಮಾಸಿಕ ಇ-ಮ್ಯಾಗಝೀನ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಸುಲಭ ಬೋಧನೆ ಮತ್ತು ಕಲಿಕೆಗಾಗಿ ಅನೇಕ ಅವಕಾಶಗಳಿದ್ದು, ಅವುಗಳ ಸದ್ಬಳಕೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸನ್ನದ್ಧರಾಗಬೇಕಿದೆ. ಕೃತಕಬುದ್ಧಿಮತ್ತೆಯ ಬಳಕೆ ಮೂಲಕ ಮಕ್ಕಳ ಸಮಯದ ಉಳಿತಾಯ, ಸಾಕಷ್ಟು ಕಲಿಕಾ ವಿಷಯಗಳ ಸಂಗ್ರಹ, ಬೆರಳತುದಿಯಲ್ಲಿ ಇಡೀ ಸಮಗ್ರ ವಿಷಯವಸ್ತುವನ್ನು ಕೂಡಬಲ್ಲ ಸಮರ್ಥತೆಯನ್ನು ಗಳಿಸಿಕೊಡಬೇಕು ಎಂದರು.
ಚಿಕ್ಕಬಳ್ಳಾಪುರ ಡಯಟ್ ನ ಹಿರಿಯ ಉಪನ್ಯಾಸಕಿ ಟಿ.ಎಚ್.ಯಶೋಧ ಮಾತನಾಡಿ, ಹೊಸಶೈಕ್ಷಣಿಕ ಯುಗಕ್ಕೆ ಹೊಂದಿಕೊಂಡಂತೆ ಶಿಕ್ಷಕರು ಪರೀಕ್ಷೆಗಳು, ಮೌಲ್ಯಮಾಪನ, ಕಲಿಕೋಪಕರಣಗಳ ತಯಾರಿ, ವೈಯಕ್ತೀಕರಿಸಿದ ಕಲಿಕೆ ವ್ಯವಸ್ಥೆಯ ಅಳವಡಿಕೆ, ಉತ್ತಮ ಶೈಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಕೃತಕಬುದ್ಧಿಮತ್ತೆಯನ್ನು ಬಳಿಸಿಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳಿಗೂ ಹೆಚ್ಚುವರಿ ಬೆಂಬಲವಿರುವ ಕ್ಷೇತ್ರಗಳನ್ನು ಗುರುತಿಸಿ ಬೋಧನಾ ಪರಿಣಾಮಕಾರಿತ್ವ ಸಾಧಿಸಲು ಎಐ ಬಳಕೆ ಸೂಕ್ತವಾದುದಾಗಿದೆ ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಎಐ ಬಳಕೆಯು ದೊಡ್ಡ ಪ್ರಮಾಣದಲ್ಲಿ ವಿಚಾರಗಳನ್ನು ಉತ್ಪಾದಿಸುವಷ್ಟು ಸಮರ್ಥವಾಗಿದ್ದು, ಶಾಲಾ ಯೋಜನೆಯ ಅನುಷ್ಟಾನಗೊಳಿಸುವಲ್ಲಿ ಶಿಕ್ಷಕರಿಗೆ ಸಹಕಾರಿಯಾಗಿದೆ. ಶಾಲೆಯಲ್ಲಿ ಇ-ಮ್ಯಾಗಜೀನ್ ತಯಾರಿ, ಪ್ರಾರ್ಥನಾ ಅವಧಿಯ ಚಟುವಟಿಕೆಗಳ ಸಂಘಟನೆ, ಪರೀಕ್ಷೆಗಳನ್ನು ರೂಪಿಸುವಲ್ಲಿ ಕೃತಕಬುದ್ಧಿಮತ್ತೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮಾಸಿಕ ಇ-ಮ್ಯಾಗಝೀನ್ “ಸುಗಜ್ಯೋತಿ”ಯ 4 ನೇ ಆವೃತ್ತಿಯನ್ನು ಪ್ರಾಂಶುಪಾಲ ಎಂ.ಮುನಿಕೆಂಪೇಗೌಡ ಅವರು ಬಿಡುಗಡೆ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಕಲಿಕಾಪ್ರಗತಿ ಕುರಿತು ಸಮಾಲೋಚನೆ ನಡೆಸಿದರು. ಶಿಕ್ಷಕ ಮಧು, ಬಿ.ನಾಗರಾಜು, ಶಿಕ್ಷಕಿ ಪ್ರೇಮಾ, ರಕ್ಷಿತಾ ಹಾಜರಿದ್ದರು.








