Melur, Sidlaghatta : ನೀವು ನಿಜವಾದ ರಾಜಕಾರಣ ಮಾಡುವುದೇ ಆದರೆ, ನಿಮಗೆ ತಾಕತ್ತಿದ್ದರೆ ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎನ್.ಡಿ.ಎ ಮೈತ್ರಿ ಪಕ್ಷದಿಂದ ಬಿ ಫಾರಂ ತಗೊಳ್ತೀರಾ ನೋಡೋಣ ಎಂದು ಸಂಸದ ಡಾ.ಕೆ.ಸುಧಾಕರ್ ಗೆ ಶಾಸಕ ಬಿ.ಎನ್.ರವಿಕುಮಾರ್ ನೇರ ಸವಾಲು ಹಾಕಿದ್ದಾರೆ.
ಮೇಲೂರಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂರು ಬಾರಿ ಶಾಸಕರು, ಒಮ್ಮೆ ಸಚಿವರಾಗಿದ್ದ ನೀವು ಯಾರ ವಿರುದ್ದ ಸೋತು ಹೋದ್ರಿ ಎಂಬ ಪರಿಜ್ಞಾನ ಇದ್ಯಾ, ಒಬ್ಬ ಸಾಧಾರಣ ವ್ಯಕ್ತಿಯ ವಿರುದ್ದ ಸೋತಿದ್ದೀರಿ. ನಾಚಿಕೆ ಆಗಲ್ವಾ ಎಂದು ವ್ಯಂಗ್ಯವಾಡಿದರು.
ನಿಮ್ಮ ಮುಖ ನೋಡಿ ಯಾರೂ ನಿಮಗೆ ಓಟು ಹಾಕಿಲ್ಲ. ಈ ಕಡೆ ದೇವೇಗೌಡರು ಆ ಕಡೆ ಮೋದಿ ಮುಖ ನೋಡಿ ನಿಮಗೆ ಓಟು ಬಿತ್ತೇ ವಿನಹ ನಿಮ್ಮ ಮುಖ ನೋಡಿ ಯಾರೂ ಓಟು ಹಾಕಿಲ್ಲ ಎಂದರು.
ಆದರೆ ಗೆದ್ದ ಅಹಂಕಾರದಲ್ಲಿ ನೀವು ಏನು ಮಾಡ್ತಾ ಇದ್ದೀರಿ, ಏನು ಮಾತನಾಡುತ್ತಿದ್ದೀರಿ ಎನ್ನುವ ಪರಿಜ್ಞಾನ ಇದ್ಯಾ. ನೀವು ಯಾರ ವಿರುದ್ದ ಸೋತು ಹೋದಿರೋ ಅವರ ತರಾನೆ ಹುಚ್ಚುಚ್ಚಾಗಿ ಮಾತನಾಡುತ್ತಿದ್ದೀರಿ ಅಲ್ವಾ, ನಿಮಗೆ ಮಾನ ಮರ್ಯಾದೆ ಏನಾದರೂ ಇದ್ಯಾ ಎಂದು ಪ್ರಶ್ನಿಸಿದರು.
ನೀವು ಅಧಿಕಾರಕ್ಕೆ ಬಂದ ಮೇಲೆ ಏನೇನು ಮಾಡಿದ್ದೀರಿ, ಯಾರನ್ನು ತುಳಿದಿದ್ದೀರಿ. ಪಕ್ಷವನ್ನು ಎಷ್ಟು ಗುಂಪುಗಳನ್ನಾಗಿ ಮಾಡಿದ್ದೀರಿ. ಎಷ್ಟೆಷ್ಟು ಕೇಸುಗಳನ್ನು ಹಾಕಿಸಿದ್ದೀರಿ ಎಲ್ಲ ಲೆಕ್ಕ ನನ್ನ ಬಳಿ ಇದೆ.
ಮತದಾರರು ಮತ ಹಾಕಿದ್ದು ಅಧಿಕಾರಕ್ಕೆ ಬಂದಿದ್ದೀರಿ. ಭಯ ಇರಲಿ, ಜನ ನಿಮ್ಮನ್ನು ಗಮನಿಸುತ್ತಿದ್ದಾರೆ ಎನ್ನುವ ಜ್ಞಾನ ಇರಲಿ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ರಾಜಕಾರಣ ಮಾಡುತ್ತಿದ್ದು ಅವರನ್ನು ನೋಡಿ ಕಲಿಯಿರಿ. ಅವರ ಕಾಲ ಕೆಳಗೆ ಹತ್ತು ಸಲ ನುಗ್ಗಿ ಆಗಲಾದರೂ ಬುದ್ದಿ ಬರುತ್ತದೆ ಎಂದರು.
ನೀವು ಆರೋಗ್ಯ ಸಚಿವರಾಗಿದ್ದಾಗ ಕೋವಿಡ್ ಅವಯಲ್ಲಿ ನೀವು ಮಾಡಿದ ಸಾವಿರಾರು ಕೋಟಿ ರೂ.ಗಳ ಹಗರಣ ಮಾಡಿದ್ದೀರಿ. ಅದು ಇಡೀ ದೇಶಕ್ಕೆ ಗೊತ್ತು. ನಿಮ್ಮ ಮಾತು ಕೇಳಿ ಅಧಿಕಾರಿಗಳು ತಪ್ಪು ಮಾಡಿದ್ದಾರೆ. ವರದಿ ಬಹಿರಂಗ ಗೊಂಡರೆ ಅನೇಕ ಐಎಎಸ್, ಕೆಎಎಸ್ ಅಧಿಕಾರಿಗಳು ಜೈಲಿಗೆ ಹೋಗ್ತಾರೆ. ಅವರ ಮುಖ ನೋಡಿ ಸಿಎಂ ಸಿದ್ದರಾಮಯ್ಯ ಅವರು ತನಿಖಾ ವರದಿಯನ್ನು ಬಹಿರಂಗ ಪಡಿಸದೆ ಪೆಂಡಿಂಗ್ ಇಟ್ಟಿದ್ದಾರೆ. ಇದು ಸತ್ಯ ಎಂದರು.
ಮುಂದಿನ ಭಾರಿ ಎನ್ಡಿಎ ಅಧಿಕಾರಕ್ಕೆ ಬರುತ್ತೆ. ಕುಮಾರಸ್ವಾಮಿ ಅವರೆ ಸಿಎಂ ಆಗ್ತಾರೆ. ಆಗ ನಾನೇ ಕೊವಿಡ್ ಹಗರಣವನ್ನು ತನಿಖೆ ನಡೆಸಲು ಮನವಿ ಅವರಲ್ಲಿ ಮಾಡ್ತೇನೆ, ನಿಮಗೆ ಶಿಕ್ಷೆ ಆಗಬೇಕೆಂದು ಕೂಡ ಒತ್ತಾಯಿಸುತ್ತೇನೆ. ಇದು ಸತ್ಯ ಎಂದರು.
ನೀವು ಎಲ್ಲೆಲ್ಲಿ ಆಸ್ತಿ ಮಾಡಿದ್ದೀರಿ, ಯಾರ ಬಳಿ ಕಮೀಷನ್ ಹಣ ಪಡೆದಿದ್ದೀರಿ ಎಲ್ಲ ಮಾಹಿತಿಯೂ ದಾಖಲೆಗಳ ಸಮೇತ ನನ್ನ ಬಳಿ ಇದೆ. ಬನ್ನಿ ಡಿಸಿ ಕಚೇರಿಗೆ ಬರುತ್ತೇನೆ. ಚರ್ಚೆ ಮಾಡೋಣ ನಿಮ್ಮ ಎಲ್ಲ ಹಗರಣಗಳನ್ನು ಬಯಲಿಗೆ ಇಡ್ತೇನೆ ಎಂದು ಚರ್ಚೆಗೆ ಆಹ್ವಾನ ನೀಡಿದರು.
ನಾನು ರೈತನ ಮಗ. ಈಗಲೂ ಕೃಷಿ ಮಾಡ್ತೇನೆ. ವ್ಯವಹಾರ ಮಾಡ್ತೇನೆ. ನಾನೇನಾದರೂ ತಪ್ಪು ಮಾಡಿದರೆ ಕೇಳಿ. ನಿಮ್ಮ ಬಗ್ಗೆ ನಾನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲವಲ್ಲಾ. ಆದರೆ ನನ್ನ ಬಗ್ಗೆ ಯಾಕೆ ನೀವು ನಾಲಿಗೆ ಹರಿ ಬಿಡ್ತಿರೋದು, ಸುಖಾ ಸುಮ್ಮನೆ ನನ್ನ ಮೇಲೆ ಆರೋಪ ಮಾಡುವುದಕ್ಕೂ ಮುನ್ನ ಹತ್ತಲ್ಲ ನೂರು ಭಾರಿ ಆಲೋಚನೆ ಮಾಡಿ ಎಂದು ಎಚ್ಚರಿಕೆ ನೀಡಿದರು.








