Sidlaghatta : ಶಿಡ್ಲಘಟ್ಟದಿಂದ ಬೆಂಗಳೂರಿನತ್ತ ಸಂಚರಿಸುವ KSRTC ಸಾರಿಗೆ ಇಲಾಖೆಯ ಬಸ್ಸುಗಳು ಪದೇಪದೆ ಮಧ್ಯ ರಸ್ತೆಯಲ್ಲಿ ಕೆಟ್ಟು ನಿಲ್ಲುತ್ತಿದ್ದು, ದಿನನಿತ್ಯ ಪ್ರಯಾಣಿಸುವವರಿಗೆ ತೀವ್ರ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಶಾಲೆ ಮತ್ತು ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ತಲುಪಲು ವಿಫಲವಾಗುತ್ತಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಮಾಡಬೇಕು ಹಾಗೂ ಪ್ರಯಾಣಿಕರ ಸುರಕ್ಷತೆಗೂ ಪ್ರಾಮುಖ್ಯತೆ ನೀಡಬೇಕು ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಪ್ರತಿ ಬೆಳಿಗ್ಗೆಯೂ ಶಾಲಾ ವಿದ್ಯಾರ್ಥಿಗಳು, ನೌಕರರು, ಆಸ್ಪತ್ರೆಗಳಿಗೆ ಹೋಗುವವರು ಹಾಗೂ ಪರೀಕ್ಷೆಗಳಿಗೆ ಹೊರಡುವ ವಿದ್ಯಾರ್ಥಿಗಳು ಆತುರದ ಜೊತೆಗೆ ಬಸ್ ನಿಲ್ದಾಣ ಸೇರಿಕೊಳ್ಳುತ್ತಾರೆ. ಆದರೆ, ಬಸ್ ಯಾವಾಗ ಕೆಡೀತೋ ಎಂಬ ಅಂಜಿಕೆ ಸದಾ ಕಾಡುತ್ತಿದೆ.
ನಿಗದಿತ ಸಮಯಕ್ಕೆ ಬಸ್ಸು ಹತ್ತಿದರೂ, ಬಸ್ ದಾರಿಮಧ್ಯೆ ಕೆಟ್ಟು ನಿಲ್ಲುವ ಕಾರಣದಿಂದ ಪ್ರಯಾಣಿಕರು ತಾವು ತಲುಪಬೇಕಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪುವಲ್ಲಿ ವಿಫಲರಾಗುತ್ತಿದ್ದಾರೆ. ವಾಹನ ದುರಸ್ಥಿಗೆ ಬೇರೊಂದು ಬಸ್ಸು ವ್ಯವಸ್ಥೆ ಮಾಡಬೇಕಾದರೆ, ಡಿಪೋಗೆ ಕರೆ ಮಾಡುವುದು, ಬದಲಾವಣೆ ಬಸ್ಸು ಬರುವವರೆಗೆ ಕಾಯುವುದು—ಇವೆಲ್ಲಾ ಸಮಯ ಹಿಡಿಯುವ ಪ್ರಕ್ರಿಯೆಗಳಾಗಿವೆ. ಇತರ ಬಸ್ಸುಗಳಿಗೆ ಹೋಗೋಣವೆಂದರೂ, ಬೆಳಗ್ಗೆ 6 ರಿಂದ 10ರವರೆಗೆ ಎಲ್ಲ ಬಸ್ಸುಗಳೂ ಜನಸಂದಣಿಯಿಂದ ತುಂಬಿರುತ್ತವೆ.
ಪ್ರತಿಯೊಂದು ಬಸ್ಸಿನಲ್ಲಿ ಕನಿಷ್ಠ 70 ಮಂದಿ ಪ್ರಯಾಣಿಕರು ಇದ್ದರೂ, ಎಲ್ಲರೂ ಪರ್ಯಾಯ ಬಸ್ಸುಗಳಿಗೆ ಹತ್ತುವುದು ಸಾಧ್ಯವಿಲ್ಲ. ಇದರಿಂದ ಕೆಲಸಕ್ಕೆ ಅಥವಾ ಕಚೇರಿಗೆ ಹೋಗುವವರು ವಿಳಂಬವಾಗುತ್ತಿದ್ದಾರೆ. ಈಗ ಬಹುತೇಕ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿ ಇರುವುದರಿಂದ, ಗಡಿದಾಟಿದರೆ ನೋಟಿಸ್ ಬರುವ ಭೀತಿಯೂ ಇದೆ ಎಂದು ಪ್ರಯಾಣಿಸುತ್ತಿದ್ದ ಮಹಿಳೆ ಸಾವಿತ್ರಮ್ಮ ತಿಳಿಸಿದ್ದಾರೆ.
ಬೆಂಗಳೂರು ನಗರಕ್ಕೆ ಮಾತ್ರ ಉತ್ತಮ ಬಸ್ಸುಗಳ ನಿಯೋಜನೆ ಮಾಡಿ, ಗ್ರಾಮೀಣ ಪ್ರದೇಶಗಳಿಗೆ ಹಳೆಯ ಅಥವಾ ಕಳಪೆ ಬಸ್ಸುಗಳನ್ನು ನೀಡುವುದು ನ್ಯಾಯವಲ್ಲ. ಬಸ್ ರಸ್ತೆಗೆ ಬರುವ ಮೊದಲು ಅವುಗಳ ತಾಂತ್ರಿಕ ಸ್ಥಿತಿಯ ತಪಾಸಣೆ ಮಾಡುವ ಪ್ರಕ್ರಿಯೆ ಕಡ್ಡಾಯವಾಗಬೇಕೆಂದು ಹಿರಿಯ ನಾಗರಿಕ ಹನುಮಂತಯ್ಯ ಎಚ್ಚರಿಕೆ ನೀಡಿದರು.