Sidlaghatta : ಗೋವುಗಳು ಹಿಂದೂಗಳ ಪಾಲಿಗೆ ದೇವರ ಸಮಾನ, ಅವುಗಳನ್ನು ನಾವು ಪೂಜಿಸುತ್ತೇವೆ ಮತ್ತು ಆರಾಧಿಸುತ್ತೇವೆ. ಹಾಗಾಗಿ ಅವುಗಳನ್ನು ರಕ್ಷಿಸುವುದು ನಮ್ಮ ಧ್ಯೇಯ ಮತ್ತು ಧರ್ಮಕೂಡ ಆಗಬೇಕಿದೆ ಎಂದು ಭಜರಂಗದಳದ ತಾಲ್ಲೂಕು ಸಂಚಾಲಕ ಬಿ.ವೆಂಕಟೇಶ್ ತಿಳಿಸಿದರು.
ನಗರದ ಕಾಳಿಕಾಂಬ ಕಮ್ಮಠೇಶ್ವರ ಸಮುದಾಯ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಇತ್ತೀಚೆಗೆ ಆರು ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದೇವೆ. ಮುಂದಿನ ದಿನಗಳಲ್ಲೂ ಗೋವುಗಳನ್ನು ರಕ್ಷಿಸುವ ನಮ್ಮ ಕೆಲಸವನ್ನು ಮುಂದುವರೆಸುತ್ತೇವೆ ಎಂದರು.
ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ನ ಕೆಲಸ ಕೇವಲ ಶ್ರೀರಾಮ ಶೋಭಾಯಾತ್ರೆ ನಡೆಸುವುದಷ್ಟೆ ಅಲ್ಲ, ಹಿಂದೂ ಸಮಾಜದಲ್ಲಿ ಇನ್ನಷ್ಟು ಐಕ್ಯತೆಯನ್ನು ಹೆಚ್ಚಿಸಲು ಹಿಂದೂಗಳನ್ನು ಸಂಘಟಿಸುವುದಾಗಿದೆ. ದೇವಾಲಯಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಹನುಮಾನ ಚಾಲೀಸಾ ನಡೆಸುವುದು, ಗೀತೆಗಾಯನ ಮಾಡುವುದಾಗಿದೆ ಎಂದು ಹೇಳಿದರು.
ಜತೆಗೆ ಶ್ರೀರಾಮಾಯಣ, ಮಹಾಭಾರತದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿದೆ ಎಂದು ವಿವರಿಸಿದರು.
ಪ್ರತಿ ವರ್ಷವೂ ಶ್ರೀರಾಮ ಶೋಭಾಯಾತ್ರೆಯನ್ನು ಮುಂದುವರೆಸುತ್ತೇವೆ. ಈ ಹಿಂದೆ ಇದ್ದಂತ ಗುರುಕುಲ ಪದ್ದತಿಯ ಶಿಕ್ಷಣದ ಕೇಂದ್ರಗಳನ್ನು ತೆಗೆಯಲು ಕೂಡ ಚಿಂತಿಸಲಾಗುತ್ತಿದೆ ಎಂದು ಹೇಳಿದ ಅವರು, ಶಿಡ್ಲಘಟ್ಟದಲ್ಲಿ ನಡೆದ ಶ್ರೀರಾಮ ಶೋಭಾಯಾತ್ರೆಯ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ನಗರಸಭೆ ಸದಸ್ಯ ನಾರಾಯಣಸ್ವಾಮಿ, ಭಜರಂಗ ದಳದ ಗುಡಿಹಳ್ಳಿ ಮಂಜುನಾಥ್, ಕೊತ್ತನೂರು ರವಿ, ಮೇಲೂರು ಅನಿಲ್, ನಡಿಪಿನಾಯಕನಹಳ್ಳಿ ಅಜಿತ್, ರಾಮಾಂಜಿ, ಎನ್.ಪಿ.ಜೀವನ್, ದಿವಾಕರ್, ಲಕ್ಷ್ಮೀಕಾಂತ್ ಹಾಜರಿದ್ದರು.