Sidlaghatta : ಹಬ್ಬ ಹರಿದಿನಗಳನ್ನು ಎಲ್ಲರೂ ಕೂಡ ಸಾಮರಸ್ಯದಿಂದ ಆಚರಿಸಬೇಕು. ಇತರರ ಧರ್ಮ, ಆಚರಣೆಗಳನ್ನು ಪರಸ್ಪರರು ಗೌರವಿಸಬೇಕು. ಆಗಲೆ ಸಮಾಜದಲ್ಲಿ ಸಾಮರಸ್ಯ ಮೂಡಿ ನಿರೀಕ್ಷೆಯಂತೆ ಅಭಿವೃದ್ದಿ ಸಾಧ್ಯವಾಗಲಿದೆ. ಸುಖ ಶಾಂತಿ ನೆಮ್ಮದಿಯ ಬದುಕು ನಮ್ಮೆಲ್ಲರದ್ದಾಗಲಿದೆ ಎಂದು BJP ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ನಗರದ ಮಯೂರ ವೃತ್ತದಲ್ಲಿನ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಂ ಕುಟುಂಬಗಳಿಗೆ ಗುರುವಾರ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
ರಂಜಾನ್ ಹಬ್ಬಕ್ಕೆ ಮುಸ್ಲಿಂ ಕುಟುಂಬಗಳಿಗೆ ಹಾಗೂ ಯುಗಾದಿ ಹಬ್ಬಕ್ಕೆ ಹಿಂದೂ ಬಂಧುಗಳ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಉದ್ದೇಶವಿದ್ದು ಹಬ್ಬಕ್ಕೂ ಮುಂಚೆ ವಿತರಿಸಲಾಗುವುದು. ಯಾವುದೆ ಹಬ್ಬ ಹರಿದಿನಗಳಿಗೂ ಅದರದ್ದೇ ಆದ ಮಹತ್ವ ಸಂಪ್ರದಾಯವಿದ್ದು ಎಲ್ಲರೂ ಸೌಹಾರ್ಧತೆಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಕೋರಿದರು.
ಕಳೆದ ಹಲವು ವರ್ಷಗಳಿಂದಲೂ ರಂಜಾನ್ ತಿಂಗಳಲ್ಲಿ ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿಕೊಂಡು ಬರುವ ಪರಿಪಾಠ ಬೆಳೆಸಿಕೊಂಡಿದ್ದು ಈ ವರ್ಷವೂ ಸಹ ದಿನಸಿ ಕಿಟ್ ವಿತರಿಸುತ್ತಿದ್ದೇವೆ. ಎಲ್ಲರೂ ಸಹ ದಿನಸಿ ಕಿಟ್ ಪಡೆದು ರಂಜಾನ್ ಹಬ್ಬವನ್ನು ಸಂತಸದಿಂದ ಆಚರಿಸಬೇಕು ಎಂದರು.
500ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು. ಇನ್ನಷ್ಟು ಕುಟುಂಬಗಳಿಗೆ ವತರಿಸಲಿದ್ದೇವೆ ಎಂದು ತಿಳಿಸಿದರು.
ಟ್ರೈಲೈಪ್ ಆಸ್ಪತ್ರೆಯ ಡಾ.ಶಫೀಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ಸಂಜೀವಪ್ಪ, ಕೊತ್ತನೂರು ಜಗದೀಶ್, ನರೇಶ್, ಪುರುಷೋತ್ತಮ್ ಹಾಜರಿದ್ದರು.








