Sidlaghatta : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಶನಿವಾರ ರೆಡ್ ಕ್ರಾಸ್ ಸಂಸ್ಥೆ, ಅಖಿಲ ಕರ್ನಾಟಕ ಪದ್ಮಭೂಷಣ ಡಾ. ಮೆಗಾಸ್ಟಾರ್ ಚಿರಂಜೀವಿ ಯುವತ ಮತ್ತು ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘ ಶಿಡ್ಲಘಟ್ಟ ಘಟಕದ ವತಿಯಿಂದ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅಭಿಮಾನಿಗಳು ಹಾಗೂ ಯುವಕರು ಶಿಬಿರದಲ್ಲಿ ಸುಮಾರು 60 ಯೂನಿಟ್ ಗಿಂತ ಹೆಚ್ಚು ರಕ್ತವನ್ನು ದಾನ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಪದ್ಮಭೂಷಣ ಡಾ. ಚಿರಂಜೀವಿ ಅಭಿಮಾನಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಸತ್ಯನಾರಾಯಣ ಮಹೇಶ್ ಮಾತನಾಡಿ, “ಮೆಗಾಸ್ಟಾರ್ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವ ನಮಗೆ ಸ್ಫೂರ್ತಿ. ಹಾಗಾಗಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಮುಂದೆಯೂ ಇಂತಹ ಉತ್ತಮ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತೇವೆ” ಎಂದು ಹೇಳಿದರು.
“ಚಿರಂಜೀವಿ ಅಭಿಮಾನಿಗಳ ನೇತೃತ್ವದಲ್ಲಿ ಶಿಡ್ಲಘಟ್ಟ ಸೇರಿ ದೇಶದಾದ್ಯಂತ ಈಗಾಗಲೇ 73ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿದೆ. ವಿಶ್ವ ರಕ್ತದಾನ ದಿನದ ಮಹತ್ವವನ್ನು ಜನರಿಗೆ ತಿಳಿಸಲು ಅಭಿಮಾನಿಗಳು ಮುಂದಾಗಿದ್ದು ಶಿಡ್ಲಘಟ್ಟದಲ್ಲಿಯೇ 60 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗಿದೆ . ಈ ಸೇವಾ ಚಟುವಟಿಕೆಯನ್ನು ಮುಂದುವರಿಸಲು ಚಿರಂಜೀವಿ ಅವರು ನಮಗೆ ವಿಡಿಯೋ ಸಂದೇಶ ಕಳುಹಿಸಿ ರಕ್ತದಾನಿಗಳಿಗೂ ಸಂಘಟಕರಿಗೂ ಧನ್ಯವಾದ ಸಲ್ಲಿಸಿದ್ದಾರೆ” ಎಂದು ಹೇಳಿದರು.
ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದ ಎಲ್ಲರಿಗೆ ಸಂಘದ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಚಿರಂಜೀವಿ ಯುವತ ತಾಲ್ಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ರಾಜ್ಯ ಜಂಟಿ ಕಾರ್ಯದರ್ಶಿ ದಿನೇಶ್ ಬಾಬು, ಅಖಿಲ ಕರ್ನಾಟಕ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘದ ಜಿಲ್ಲಾಧ್ಯಕ್ಷ ಬುಜ್ಜಿ ನಾಯಕ್, ಜಿಲ್ಲಾ ಸದಸ್ಯ ರಾಧಾಕೃಷ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮದಾಸ್, ಗಜೇಂದ್ರ ನಾಯಕ್, ವಿ.ವೆಂಕಟರಮಣ, ವೆಂಕಟರೆಡ್ಡಿ, ರವಿಚಂದ್ರ ಹಾಗೂ ಹಲವಾರು ಅಭಿಮಾನಿಗಳು ಹಾಜರಿದ್ದರು.