Sidlaghatta : ಸ್ವ ಸಹಾಯ ಸಂಘಗಳು ವಿವಿಧ ಕರಕುಶಲ ವಸ್ತುಗಳು, ತಿಂಡಿತನಿಸು, ಗೃಹೋಪಯೋಗಿ ಸಾಮಗ್ರಿಗಳನ್ನು ತಯಾರಿಸಿ ಮಾರುಕಟ್ಟೆಗೆ ತರುತ್ತಿದ್ದರೂ, ಮಾರುಕಟ್ಟೆಯ ಜಾಲ ಮತ್ತು ತಂತ್ರಜ್ಞಾನಗಳ ಕೊರತೆಯಿಂದಾಗಿ ಅವರ ಉತ್ಪನ್ನಗಳು ಸೂಕ್ತ ಮಟ್ಟದಲ್ಲಿ ವ್ಯಾಪಾರವಾಗುತ್ತಿಲ್ಲ ಎಂಬ ಆತಂಕವನ್ನು ಶಾಸಕ ಬಿ.ಎನ್. ರವಿಕುಮಾರ್ ವ್ಯಕ್ತಪಡಿಸಿದರು.
ಶಿಡ್ಲಘಟ್ಟದ ಶ್ರೀ ವಾಸವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಜ್ಞಾನೋದಯ ಗ್ರಾಮೀಣ ವಿದ್ಯಾ ಟ್ರಸ್ಟ್ ಮತ್ತು ಸಂಜೀವಿನಿ ಡೇ ಎನ್ಆರ್ಎಲ್ಎಂ ಸಹಯೋಗದಲ್ಲಿ ಆಯೋಜಿಸಲಾದ ಸ್ವ ಸಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳೆಯರು ಸ್ವಾಭಿಮಾನಿ ಬದುಕನ್ನು ನಡೆಸಲು ಈ ಸಂಘಗಳು ಬಹುಮಟ್ಟಿಗೆ ನೆರವಾಗುತ್ತಿವೆ. ಆದರೆ ಸಮರ್ಪಕ ಮಾರುಕಟ್ಟೆ, ಮಾರಾಟದ ತಂತ್ರಗಳು ಮತ್ತು ಬ್ರ್ಯಾಂಡಿಂಗ್ ತಂತ್ರಜ್ಞಾನಗಳ ಕೊರತೆಯಿಂದ ವ್ಯಾಪಾರ ನಿರೀಕ್ಷಿತ ಮಟ್ಟಕ್ಕಿಲ್ಲ. ಇತ್ತೀಚೆಗೆ ಸಾವಯವ ಉತ್ಪನ್ನಗಳ ಬಳಕೆದಾರರ ಪ್ರತ್ಯೇಕ ವರ್ಗವೊಂದು ರೂಪುಗೊಂಡಿದ್ದು, ಅದರೊಂದಿಗೆ ಗುಣಮಟ್ಟ, ಪ್ಯಾಕೇಜಿಂಗ್ ಹಾಗೂ ವಿಶ್ವಾಸಾರ್ಹ ಪ್ರಮಾಣ ಪತ್ರಗಳು ಪ್ರಮುಖವಾಗಿ ಪರಿಗಣನೆಗೆ ಬರುತ್ತಿವೆ ಎಂದು ಅವರು ತಿಳಿಸಿದರು.
ಇಂತಹ ಉತ್ಪನ್ನಗಳಿಗೆ ‘ಸಾವಯವ ಪ್ರಮಾಣಪತ್ರ’ ಇದ್ದರೆ ಮಾತ್ರ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಮತ್ತು ಬೇಡಿಕೆ ದೊರೆಯುತ್ತದೆ. ರೈತ ಮಹಿಳೆಯರು ಮತ್ತು ಸಂಘಗಳು ಈ ಪ್ರಮಾಣ ಪತ್ರ ಪಡೆಯುವಲ್ಲಿ ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ನೆರವಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಬಂಧಿತ ಅಧಿಕಾರಿಗಳ ಹಾಗೂ ಒಕ್ಕೂಟದ ನಾಯಕರ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಚರ್ಚೆ ನಡೆಸಲಾಗುವುದು ಎಂದರು.
ಈ ಮೇಳದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ೧೫ ಒಕ್ಕೂಟಗಳ ೨೮ ಸ್ವ ಸಹಾಯ ಸಂಘಗಳು ಪಾಲ್ಗೊಂಡಿದ್ದು, ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಶಾಸಕ ರವಿಕುಮಾರ್ ಮೇಳದ ಎಲ್ಲಾ ಸ್ಟಾಲ್ಗಳನ್ನು ವೀಕ್ಷಿಸಿ ಕೆಲವು ವಸ್ತುಗಳನ್ನು ಖರೀದಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಪೌರಾಯುಕ್ತ ಮೋಹನ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಮುಖಂಡರಾದ ತಾದೂರು ರಘು, ಲಕ್ಷ್ಮಿನಾರಾಯಣರೆಡ್ಡಿ, ಜ್ಞಾನೋದಯ ಟ್ರಸ್ಟ್ನ ಸಿಇಒ ಕೆ. ರಾಜೇಂದ್ರ ಪ್ರಸಾದ್, ಆಯೋಜಕಿ ಆರ್. ಲತಾ, ವಾಸವಿ ಸಂಸ್ಥೆಯ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ರೂಪಸಿ ರಮೇಶ್, ನಿರ್ದೇಶಕ ರಾಜೇಶ್ ಹಾಗೂ ಸಂಜೀವಿನಿ ಯೋಜನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.