Home News ಇಬ್ಬರು ಮುಖಂಡರ ನಡುವಿನ ಹಗ್ಗ ಜಗ್ಗಾಟದಲ್ಲಿ ಶಿಡ್ಲಘಟ್ಟ ಕಾಂಗ್ರೆಸ್

ಇಬ್ಬರು ಮುಖಂಡರ ನಡುವಿನ ಹಗ್ಗ ಜಗ್ಗಾಟದಲ್ಲಿ ಶಿಡ್ಲಘಟ್ಟ ಕಾಂಗ್ರೆಸ್

0
Sidlaghatta Congress Party Trouble

Sidlaghatta : ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಎಂಬ ಇಬ್ಬರು ಮುಖಂಡರ ನಡುವಿನ ಹಗ್ಗ ಜಗ್ಗಾಟದಲ್ಲಿ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಮೂಲ ಕಾಂಗ್ರೆಸ್ ಪಕ್ಷ ಒಡೆದ ಮನೆಯಂತಾಗಿದೆ ಎನ್ನುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಕುರುಕ್ಷೇತ್ರ ಯುದ್ಧಕ್ಕೆ ಮುನ್ನ ಪಾಂಡವರು ಕೃಷ್ಣನನ್ನು, ಕೌರವರು ಯಾದವ ಸೈನ್ಯವನ್ನು ತಮ್ಮೊಂದಿಗೆ ಸೆಳೆದುಕೊಂಡಂತೆ ಶಿಡ್ಲಘಟ್ಟದ ಕಾಂಗ್ರೆಸ್ ಪರಿಸ್ಥಿತಿಯಿದೆ. ರಾಜೀವ್ ಗೌಡ ಅವರು ಕಾಂಗ್ರೆಸ್ ಭವನವನ್ನು ಹಾಗೂ ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ತಮ್ಮೊಂದಿಗೆ ಇರಿಸಿಕೊಂಡಿದ್ದರೆ, ಮಾಜಿ ಮಂತ್ರಿ ಹಾಗೂ ಹಿರಿಯ ವಿ.ಮುನಿಯಪ್ಪ ಅವರನ್ನು ತಮ್ಮೊಂದಿಗಿರಿಸಿಕೊಂಡಿದ್ದಾರೆ ಪುಟ್ಟು ಆಂಜಿನಪ್ಪ.

ವಿ. ಮುನಿಯಪ್ಪರವರ ನೇತೃತ್ವದಲ್ಲಿ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಟ್ಟಿ ಉಳಿಸಿ ಬೆಳೆಸಿ ಹೆಮ್ಮರವಾಗಿಸಿದ ಪಕ್ಷ ಇಂದು ಇಬ್ಬರು ನಾಯಕರ ಮುಸುಕಿನ ಗುದ್ದಾಟದಲ್ಲಿ, ಮುಗುಚಿಬಿದ್ದು ಮತ್ತೆ ಪುಟಿದೇಳದ ಸ್ಥಿತಿ ತಲುಪಿರುವುದು ದುರಂತ ಎನ್ನುತ್ತಾರೆ ಸಾಮಾನ್ಯ ಕಾರ್ಯಕರ್ತರು.

ಆರು ಬಾರಿ ಶಾಸಕರಾಗಿ 2 ಬಾರಿ ಮಂತ್ರಿಗಳಾಗಿದ್ದ ಕ್ಷೇತ್ರದ ಹಿರಿಯ ನಾಯಕನನ್ನು ಇಂದು ಮೂಲೆಗುಂಪಾಗಿಸಿದ್ದಾರೆಯೇ ಇಬ್ಬರು ಸ್ವಯಂಘೋಷಿತ ನಾಯಕರು? ಅವರ ವಯೋಸಹಜ ದೈಹಿಕ ಸಮಸ್ಯೆಗಳ ತೊಳಲಾಟದ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ನಾಯಕನ ಚುಕ್ಕಾಣಿ ಹಿಡಿಯುವ ಹುನ್ನಾರ ನಡೆಸಿದ್ದಾರೆಯೇ? ಎಂಬ ಪ್ರಶ್ನೆಗಳು ಮೂಲ ಕಾಂಗ್ರೆಸ್ಸಿಗರದ್ದಾಗಿದೆ.

ಒಬ್ಬರು ಟಿಕೆಟ್ ಸಿಗದೇ ಸ್ವತಂತ್ರ ಅಭ್ಯರ್ಥಿಯಾಗಿ ಮುನಿಯಪ್ಪರವರ ವಿರುದ್ದ ಸ್ಪರ್ಧಿಸಿ ಸೋತು ಮತ್ತೆ ಅವರ ಮನೆಗೆ ಬಾಗಿಲನ್ನೇ ಟಿಕೆಟ್ಟಿಗಾಗಿ ಬಡಿಯುತ್ತಿದ್ದರೆ, ಮತ್ತೊಬ್ಬರು ತಮ್ಮ ಹಣಬಲದಿಂದ ಟಿಕೆಟ್ ಪಡೆದು ಸೋತರೂ ತಾವೇ ನಾಯಕರೆಂದು ಬಿಂಬಿಸಿಕೊಳ್ಳುವ ಆತುರದಲ್ಲಿ ದುಡುಕು ನಿರ್ಧಾರಗಳಿಂದ ಕಾರ್ಯಕರ್ತರಿಂದ ದೂರವಾಗುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಕೂಸು ಬಡವಾದ ಹಾಗೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಗೋಳು ಕೇಳುವವರು ಯಾರು? ಎಂಬುದು ಕೆಲ ಕಾಂಗ್ರೆಸ್ಸಿಗರ ಮನದಾಳದ ಮಾತಾಗಿದೆ.

ಈ ಮಧ್ಯೆ ಕಾಂಗ್ರೆಸ್ ಪಾಳಯದಲ್ಲಿ ಮೂರು ಗುಂಪುಗಳಾಗಿ ಮೂಲ ಕಾಂಗ್ರೆಸ್ ಒಂದೆಡೆ ಯಾದರೆ ಸ್ವಯಂಘೋಷಿತ ನಾಯಕರ ಬಣಗಳು ಎರಡು ಎಂಬತಾಗಿ, ಕಾಂಗ್ರೆಸ್ ಎಂಬ ಮನೆಗೆ ಮೂರು ಬಾಗಿಲುಗಳಾಗಿದೆ.

ಕಾಂಗ್ರೆಸ್ ಪಾಳಯದಲ್ಲಿನ ಒಡಕು, ವ್ಯತ್ಯಾಸ, ಇಬ್ಬಿಬ್ಬರು ನಾಯಕರ ಅಹಂಗಳು, ಅವರ ಮೇಲೆ ಕೆಲವರ ಪ್ರಭಾವ, ಅವರ ಓಲೈಕೆಯ ವಿಧಾನಗಳನ್ನು ಕಂಡು ತೀವ್ರ ಮನನೊಂದು ಈಚೆಗೆ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಕೆಲ ಅಪ್ಪಟ ಕಾಂಗ್ರೆಸ್ಸಿಗ ನಗರಸಭಾ ಸದಸ್ಯರು ತಾವು ಕಟ್ಟಿ ಬೆಳಸಿದ ಕಾಂಗ್ರೆಸ್ ಮನೆಗೆ ವಿದಾಯ ಹೇಳುವ ಪರಿಸ್ಥಿತಿ ತಂದೊದಗಿರುವುದು ಕಾಂಗ್ರೆಸ್ ಪಕ್ಷದ ಭವಿಷ್ಯವನ್ನು ಧ್ವನಿಸುತ್ತಿದೆ. ತಮ್ಮ ಪ್ರತಿಷ್ಥೆಗಳಿಗೇ ಹೆಚ್ಚು ಪ್ರಾಧಾನ್ಯತೆ ನೀಡುತ್ತಿರುವುದರಿಂದ ನೈಜ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷ ಕ್ರಮೇಣ ಕಳೆದುಕೊಳ್ಳುತ್ತಿದೆ.

ಈಚೆಗೆ ಹಲವು ಕೋಟಿಗಳ ಕಾಮಗಾರಿಗಳ ಉದ್ಘಾಟನೆಗೆ ಶಿಡ್ಲಘಟ್ಟಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಸರ್ಕಾರಿ ಆಸ್ಪತ್ರೆಯ ಕಾಮಗಾರಿ ಸಮಯದಲ್ಲಿ ತಮ್ಮ ಬಲಾಬಲಗಳನ್ನು ಪ್ರದರ್ಶಿಸುತ್ತಾ ಜಗಳವಾಡಿದ್ದ ರಾಜೀವ್ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ವರ್ತನೆಯನ್ನು ಪ್ರಸ್ತಾಪಿಸಿ, ಅದಕ್ಕಾಗಿ ಈಗ ಯಾರನ್ನೂ ಕರೆದಿಲ್ಲವೆಂದು ಹೇಳಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೇ ಈ ಇಬ್ಬರ ಮುಖಂಡರ ನಡವಳಿಕೆ ಬೇಸರ ತರಿಸಿರುವಾಗ, ಇನ್ನು ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ವಿವರಿಸಲು ಸಾಧ್ಯವಾಗದಂತಿದೆ.

ಈ ಇಬ್ಬರೂ ಮುಖಂಡರ ಸ್ವಪ್ರತಿಷ್ಠೆಯು ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಪಕ್ಷಕ್ಕೆ ಘಾತವನ್ನುಂಟು ಮಾಡುವುದು ಪ್ರತಿಯೊಬ್ಬ ಕಾರ್ಯಕರ್ತರಿಗೂ ಮನದಟ್ಟಾಗಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version