Sidlaghatta : ಮಾಜಿ ಸಚಿವ ಬಿ. ಜಡ್. ಜಮೀರ್ ಅಹ್ಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಆಗ್ರಹಿಸಿ ಶಿಡ್ಲಘಟ್ಟ ನಗರದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಅಮೀರ್ ಬಾಬಾ ದರ್ಗಾದಿಂದ ಕಾಂಗ್ರೆಸ್ ಭವನವರಿಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಸಮಾಜದಲ್ಲಿರುವ ಎಲ್ಲಾ ಜಾತಿ ವರ್ಗಗಳನ್ನು ಪ್ರೀತಿಸುವ ಬಡವರ ಸಂಕಷ್ಟಗಳನ್ನು ಅರಿತಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಮಾಡಿ ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ನಗರದಲ್ಲಿ ನಡೆಸಿದ ಮೆರವಣಿಗೆ ವೇಳೆಯಲ್ಲಿ ಜಮೀರ್ ಅಹ್ಮದ್ ಖಾನ್ ಭಾವಚಿತ್ರವುಳ್ಳ ಭಿತ್ತಿಪತ್ರಗಳನ್ನು ಹಿಡಿದು ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹರಿಪ್ರಸಾದ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರುಗಳು ಮುಸ್ಲಿಂ ಸಮುದಾಯದ ಪರವಾಗಿ ಜಮೀರ್ ಅಹ್ಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿ ಆಗಿ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಅಫ್ಸರ್ ಪಾಷಾ, ಮಾಜಿ ಸದಸ್ಯ ಸಮಿಉಲ್ಲಾ, ಮೌಲಾ ರಿಯಾಜ್, ಬಾಬಾ ಫಕ್ರುದ್ದೀನ್, ಬಾಂಬೆ ನವಾಜ್, ಸೈಯದ್ ಬಾಬಾ, ಆದಿಲ್, ಸಿ.ಎಂ. ಬಾಬು, ತನ್ವೀರ್ ಪಾಷಾ ಹಾಜರಿದ್ದರು.








