Sidlaghatta : ಜೀವ ಸಂಕುಲಕ್ಕೆ ಬದುಕಲು ಅತ್ಯಾವಶ್ಯಕವಾಗಿ ಬೇಕಾಗಿರುವ ಆಮ್ಲಜನಕ ಪರಿಸರದಲ್ಲಿ ವೃದ್ಧಿಯಾಗಲು ಪ್ರತಿಯೊಬ್ಬರು ಸಸಿ ನೆಟ್ಟು ನೀರೆರೆದು ಬೆಳೆಸಬೇಕು. ಶುದ್ಧ ಗಾಳಿ, ನೆರಳು ನೀಡುವ ಪರಿಸರದಲ್ಲಿ ಶ್ವಾಸಕೋಶದಂತೆ ವರ್ತಿಸುವ ವೃಕ್ಷಗಳು ನಮಗೆ ಅಗತ್ಯ. ಆದ್ದರಿಂದ ನಾವು ವೃಕ್ಷ ರಕ್ಷಣೆಯ ತೀರ್ಮಾನಗಳನ್ನು ಕೈಗೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿಯ ಉಳಿವಿಗೆ ಪ್ರತಿ ವ್ಯಕ್ತಿಯೂ ತಮ್ಮ ನಿತ್ಯ ಜೀವನದಲ್ಲಿ ಕಾಣಿಕೆ ನೀಡಬೇಕು. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಬದಲಾಗಬೇಕು. ಪರಿಸರ ಮನುಷ್ಯನ ಅವಿಭಾಜ್ಯ ಅಂಗ. ಪರಿಸರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಹೀಗಾಗಿ ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕು ಎಂದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ರಂಜಿತಾ.ಎಸ್. ಮಾತನಾಡಿ, ಗಿಡ ಮರಗಳನ್ನು ನೆಡುವುದು, ಸಾಧ್ಯವಾದರೆ ಸಸ್ಯಗಳ ಪೋಷಣೆ ಬಗ್ಗೆ ಗಮನ ಹರಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು. ಸಸಿ ನೆಟ್ಟರೆ ಸಾಲದು. ನೆಟ್ಟಿರುವ ಸಸಿಯನ್ನು ಬೆಳೆಯುವಂತೆ ನೋಡಿಕೊಳ್ಳುವ ಮೂಲಕ ಮರವೊಂದನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಬೇಕು. ವಸತಿ ಪ್ರದೇಶದ ವಿಸ್ತಾರ ಹೆಚ್ಚುತ್ತಿರುವುದರಿಂದ ಮರಗಿಡಗಳಿದ್ದ ಜಾಗವನ್ನೆಲ್ಲ ಸಿಮೆಂಟ್ ಕಟ್ಟಡಗಳು ಆಕ್ರಮಿಸಿಕೊಳ್ಳುತ್ತಿವೆ. ಇದರ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ, ಬೀಳುವ ಮಳೆಯ ಪ್ರಮಾಣ ತಗ್ಗಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವ ಮೊದಲು ಎಲ್ಲರೂ ಎಚ್ಚೆತ್ತುಕೊಂಡು ಗಿಡ ಮರಗಳನ್ನು ಬೆಳೆಸಲು ಮುಂದಾಗಬೇಕು ಎಂದರು.
ನ್ಯಾಯಾಲಯದಿಂದ ವಕೀಲರೊಂದಿಗೆ ಜಾಥಾ ನಡೆಸಿ, ಅಂಗಡಿಗಳ ಬಳಿ ತೆರಳಿ ನ್ಯಾಯಾಧೀಶರು ಅಂಗಡಿ ಮಾಲೀಕರುಗಳಿಗೆ, “ ಪ್ಲಾಸ್ಟಿಕ್ ಬಳಕೆಯು ಪರಿಸರ ಹಾಗೂ ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಆಹಾರದ ಮೂಲಕ ನಮ್ಮ ದೇಹದಲ್ಲಿ ಪ್ರವೇಶಿಸುತ್ತಿದೆ. ಜನರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯ, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ವಕೀಲರಾದ ಶಾಬುದ್ಧೀನ್, ರಾಮಕೃಷ್ಣ, ಮಂಜುನಾಥ್, ವೆಂಕಟೇಶ್, ನ್ಯಾಯಾಲಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.