Sidlaghatta : ಶಿಡ್ಲಘಟ್ಟ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ಮಹಿಳಾ ನ್ಯಾಯಾಧೀಶರು ಮತ್ತು ವಕೀಲರಿಂದ ಕೇಕ್ ಕತ್ತರಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸುಕನ್ಯಾ.ಸಿ.ಎಸ್. ಮಾತನಾಡಿ, ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರು. ಒಬ್ಬ ವ್ಯಕ್ತಿಯನ್ನು ಅವರ “ಆತ್ಮ” ಮತ್ತು “ವ್ಯಕ್ತಿತ್ವ”ದಿಂದ ಗುರುತಿಸಬೇಕೇ ಹೊರತು ಕೇವಲ ಲಿಂಗದಿಂದಲ್ಲ. ಮಹಿಳಾ ದಿನಾಚರಣೆ ಎಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಪುರುಷ ಮತ್ತು ಮಹಿಳೆ ಸಮಾಜದ ಎಂಬ ಬಂಡಿಯ ಎರಡು ಚಕ್ರಗಳಿದ್ದಂತೆ. ಇಬ್ಬರಿಗೂ ಸಮಾನ ಗೌರವ ಸಿಕ್ಕಾಗ ಮಾತ್ರ ಸಮಾಜ ಸುಸ್ಥಿರವಾಗಿರಲು ಸಾಧ್ಯ” ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ರೋಷನ್ ಷಾ ಮಾತನಾಡಿ, ಇಂದಿಗೂ ಅನೇಕ ಮನೆಗಳಲ್ಲಿ ಹೆಣ್ಣು ಮಗು ಹುಟ್ಟಿತು ಎಂದರೆ ಮುಖ ಸಣ್ಣದಾಗುತ್ತದೆ. ಆದರೆ ನೆನಪಿಡಿ, ಹೆಣ್ಣು ಮನೆಯ ಕಣ್ಣು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಮಿಗಿಲಾದ ಸಾಧನೆ ಮಾಡುತ್ತಿದ್ದಾರೆ. ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯಿಂದ ಹಿಡಿದು ಸೈನಿಕರವರೆಗೆ ಮಹಿಳೆಯರು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಹೆಣ್ಣು ಮಗು ಹುಟ್ಟಿದಾಗ ಅದನ್ನು ಹೊರೆ ಎಂದು ಭಾವಿಸಬೇಡಿ. ಅವಳಿಗೆ ಸರಿಯಾದ ಶಿಕ್ಷಣ ಮತ್ತು ಪ್ರೋತ್ಸಾಹ ನೀಡಿ. ಒಬ್ಬ ಮಗ ಕೇವಲ ಒಂದು ಕುಟುಂಬವನ್ನು ಬೆಳಗಿದರೆ, ಒಬ್ಬ ಮಗಳು ಎರಡು ಕುಟುಂಬಗಳಿಗೆ ಗೌರವ ತರುತ್ತಾಳೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯಾಧೀಶೆಯರು ಮತ್ತು ಮಹಿಳಾ ವಕೀಲರು ಜೊತೆಗೂಡಿ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನ್ನಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಸ್.ರಂಜಿತ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಹಿರಿಯ ವಕೀಲ ಎಂ.ಪಾಪಿರೆಡ್ಡಿ, ವಕೀಲರಾದ ಸಿ.ಲಕ್ಷ್ಮೀ, ಕೆ.ಎಂ.ನಾಗಮಣಿ, ವೀಣಾ, ಯಾಸ್ಮೀನ್ ತಾಜ್, ತಹಸೀನ್ ತಾಜ್, ಸುನೀತಾ, ದೀಪಾ, ಮೋನಿಕಾ, ಶಹತಾಜ್, ಗೀತಾ, ಕವಿತಾ, ವರ್ಣ ಹಾಜರಿದ್ದರು.








