
Dibburahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಲೋಕಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಮೂರನೇ ವರ್ಷದ ಊರ ಹಬ್ಬ ಹಾಗೂ ಅದ್ದೂರಿ ಕರಗ ಮಹೋತ್ಸವವನ್ನು ಆಚರಿಸಲಾಯಿತು.
ಶ್ರೀನಿವಾಸ ಕಲ್ಯಾಣೋತ್ಸವನ್ನು ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಸಹಕಾರದಿಂದ ಅನಂತಪುರದ ಶ್ರೀ ನಾಗರಾಜ ಶಾಸ್ತ್ರಿ ಅವರ ತಂಡ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ, ದಿಬ್ಬೂರಹಳ್ಳಿ ಗ್ರಾಮ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಕಾಲದಲ್ಲಿ ಮಳೆ ಬೆಳೆಗಳಾಗಿ ರೈತರು ಹಾಗೂ ಜನಸಾಮಾನ್ಯರು ಸಮೃದ್ಧಿಯಿಂದ ಜೀವನ ನಡೆಸುವಂತಹ ಆಗಬೇಕು ಎಂದು ಪ್ರಾರ್ಥಿಸಿದರು. ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
ಗ್ರಾಮದಲ್ಲಿ ನಡೆದ ಮೂರು ದಿನಗಳ ಕಾಲದ ಊರ ಹಬ್ಬ, ಕರಗ ಮಹೋತ್ಸವ ಹಾಗೂ ಕಲ್ಯಾಣೋತ್ಸವಕ್ಕಾಗಿ ಇಡೀ ಊರು ಶೃಂಗಾರಗೊಂಡಿತ್ತು. ಗ್ರಾಮದಲ್ಲಿರುವ ಎಲ್ಲಾ ಬೀದಿಗಳನ್ನು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸಲಾಗಿತ್ತು. ಇಡೀ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ದಿಬ್ಬೂರಹಳ್ಳಿ ಗ್ರಾಮದಲ್ಲಿರುವ ಶ್ರೀ ಭಕ್ತಾಂಜನೇಯ ಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕರಗವನ್ನು ಈ ಬಾರಿ ಬಂಗಾರಪೇಟೆಯ ಚರಣ್ ರಾಜ್ ಅವರು ಹೂತ್ತರು. ಮೂರು ದಿನಗಳ ಕಾಲ ನಡೆದ ಊರ ಹಬ್ಬ ಮತ್ತು ಕರಗ ಮಹೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಹಾಗೂ ಗ್ರಾಮಸ್ಥರ ಸಂಬಂಧಿಕರು, ಸ್ನೇಹಿತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ದರ್ಖಾಸ್ತ್ ಸಮಿತಿ ಮಾಜಿ ಸದಸ್ಯ ಬಿ. ಚಿಕ್ಕಪ್ಪಯ್ಯ, ಭೂ ಅಭಿವೃದ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಸಿ. ರಾಮಚಂದ್ರ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ಪಿ. ನಾಗರಾಜ್, ಗ್ರಾಮದ ಮುಖಂಡರಾದ ಶ್ರೀರಂಗಪ್ಪ, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಶ್ರೀಲತಾ, ಮಂಜುನಾಥ್, ತಲಕಾಯಲಬೆಟ್ಟ ದೇವಸ್ಥಾನದ ಶಿವಣ್ಣ, ಶಿಡ್ಲಘಟ್ಟ ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಆಂಜಿನಪ್ಪ, ದಿಬ್ಬೂರಹಳ್ಳಿ ಬ್ರಾಹ್ಮಣರ ಸಂಘದ ಅಧ್ಯಕ್ಷ ಶಂಕರ್, ಕಾರ್ಯದರ್ಶಿ ಎಂ.ವಿ. ಹರೀಶ್ ಬಾಬು ಹಾಗೂ ಗ್ರಾಮಸ್ಥರು ಹಾಜರಿದ್ದರು.