Sidlaghatta : ಶಿಡ್ಲಘಟ್ಟದ ಶ್ರೀಗಂಗಮ್ಮ ದೇವಾಲಯದಲ್ಲಿ ಆರನೇ ವರ್ಷದ ಶ್ರೀದ್ರೌಪದಮ್ಮ ದೇವಿಯ ಹೂವಿನ ಕರಗ ಮಹೋತ್ಸವವು ಸೋಮವಾರ ರಾತ್ರಿ ವೈಭವದೊಂದಿಗೆ ಹಾಗೂ ಭಕ್ತಿಭಾವದಿಂದ ನೆರವೇರಿತು. ನಗರದಾದ್ಯಂತ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತರು ಸೇರಿ ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು.
ಮುಳಬಾಗಿಲಿನ ನಾಗರಾಜ್ ಅವರು ತಲೆ ಮೇಲೆ ಹೂವಿನ ಕರಗ ಹೊತ್ತು ಭಕ್ತಿಯಲ್ಲಿ ಮುಳುಗಿ ಕುಣಿದರೆ, ಅವರ ಸುತ್ತಲೂ ನಿಂತಿದ್ದ ಭಕ್ತರೂ ತಮ್ಮ ಸ್ಥಾನದಲ್ಲೇ ಕುಣಿದು ಉಲ್ಲಾಸ ವ್ಯಕ್ತಪಡಿಸಿದರು. ತಮಟೆಯ ಸದ್ದಿನಲ್ಲಿ, ಹಾಡು ಹಾಗೂ ಸಂಗೀತದ ಲಯದಲ್ಲಿ ಕರಗದ ನೃತ್ಯ ಭಕ್ತರನ್ನು ಭಾವನಾಶ್ರಯದತ್ತ ಸೆಳೆದಿದ್ದು, ನೃತ್ಯವನ್ನು ಕಣ್ತುಂಬಿಕೊಂಡ ಜನರು ಆ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಬಂಧಿಸಿಕೊಂಡರು.
ಕಾರ್ಯಕ್ರಮಕ್ಕೆ ಮುನ್ನ ದೇವಾಲಯದಲ್ಲಿ ಶ್ರೀಗಂಗಮ್ಮ ಹಾಗೂ ದ್ರೌಪದಮ್ಮ ದೇವಿಯರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಶಾಸಕ ಬಿ.ಎನ್. ರವಿಕುಮಾರ್, ಬಿಜೆಪಿ ನಾಯಕರು ಸೀಕಲ್ ರಾಮಚಂದ್ರಗೌಡ ಹಾಗೂ ಆನಂದಗೌಡ ಸೇರಿ ಹಲವು ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ಪೂಜೆಯಲ್ಲಿ ಭಾಗಿಯಾದರು.
ಹೂವಿನ ಕರಗ ಉತ್ಸವದ ಅಂಗವಾಗಿ ಹೂವಿನ ವೃತ್ತದಲ್ಲಿ ನಡೆದ ರಸ ಮಂಜರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳ ಹಾಡುಗಳಿಗೆ ನೃತ್ಯ ಪ್ರದರ್ಶನಗಳು ಕಲಾ ಪ್ರಿಯರ ಮನಸ್ಸನ್ನು ಮೋಡಿ ಮಾಡಿತು.