Sidlaghatta : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಗುರುವಾರ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು, ದೇವನಹಳ್ಳಿಯಲ್ಲಿ ಜೂನ್ 25 ರಂದು ರೈತರು ನಡೆಸಿದ ಬೃಹತ್ ಹೋರಾಟದ ವೇಳೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಸೇರಿದಂತೆ ಸುಮಾರು 300 ರಿಂದ 500 ಪ್ರತಿಭಟನಾಕಾರರನ್ನು ಬಂಧಿಸಿರುವುದು ಆಕ್ಷೇಪಾರ್ಹ ಎಂದರು. ಪ್ರತಿಭಟನಾಕಾರರ ಮೇಲೆ ಯಾವುದೇ ಕಾನೂನು ಪ್ರಕರಣಗಳನ್ನು ದಾಖಲಿಸಬಾರದು ಎಂದು ಅವರು ಒತ್ತಾಯಿಸಿದರು.
ರೈತರು ತಮ್ಮ ಭೂಮಿಯನ್ನು ನೀಡಬೇಕಾದರೆ, ಅವರ ಹೆಸರಲ್ಲಿ ಪಹಣಿ ದಾಖಲೆ ಇರಬೇಕು, ಗುತ್ತಿಗೆ ಆಧಾರದ ಮೇಲೆ ಬಾಡಿಗೆ ರೂಪದಲ್ಲಿ ಮಾತ್ರ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸಬೇಕು ಎಂಬುದು ಸಂವಿಧಾನಬದ್ಧ ಹಕ್ಕು ಎಂಬುದನ್ನು ಸಂಯುಕ್ತ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ. ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆದುಕೊಳ್ಳುವುದು ಸರ್ಕಾರಕ್ಕೆ ಶಿಷ್ಟಾಚಾರವೂ ಅಲ್ಲ, ಕಾನೂನುಬದ್ಧವೂ ಅಲ್ಲ ಎಂದರು.
ರೈತರ ಭೂಮಿಯನ್ನು ಜಬರದಸ್ತಿಯಾಗಿ ತೆಗೆದುಕೊಳ್ಳುವುದು ಒಂದು ತೀವ್ರವಾದ ಅನ್ಯಾಯ. ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಅನುಸರಿಸಿದರೆ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳ ನೆರವಿನಿಂದ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯಪಾಲರಿಗೆ ಶಿರಸ್ತೆದಾರ್ ರಾಜು ಎನ್.ಪಿ. ರವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಸರ್ಕಾರದ ಈ ಕ್ರಮದ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷ ಭಕ್ತರಹಳ್ಳಿ ಕೋಟೆ ಚನ್ನೇಗೌಡ, ಕಾರ್ಯಾಧ್ಯಕ್ಷ ಮಾರುತಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಿ.ಎನ್. ಶ್ರೀಧರ್, ಖಜಾಂಜಿ ಸಿ.ಬಿ. ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಗೋರ್ಲಪ್ಪ, ಯುವ ಘಟಕದ ಅಧ್ಯಕ್ಷ ಮನೋಜ್ ಕುಮಾರ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.