Sidlaghatta : ಬೇಸಿಗೆಯ ಬಿರು ಬಿಸಿಲ ದಿನಗಳು ಆರಂಭವಾಗಿದ್ದು ಕಾಡು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಲು ಮುಂದಾಗಬೇಕೆಂದು ರೈತ ಮುಖಂಡ ನಡಿಪಿನಾಯಕನಹಳ್ಳಿ ಅಜಿತ್ ಕುಮಾರ್ ಅವರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಅರಣ್ಯದೊಳಗೆ ಜಿಂಕೆ, ಕಡವೆ, ಕಾಡು ಹಂದಿ, ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕುಡಿಯುವ ನೀರನ್ನು ಹುಡುಕಿಕೊಂಡು ಕಾಡಂಚಿನ ತೋಟಗಳಿಗೆ ಬರುವ ಸಂಖ್ಯೆ ಹೆಚ್ಚುತ್ತಿದೆ. ಹೊಲ ಗದ್ದೆ ತೋಟಗಳಲ್ಲೂ ಎಲ್ಲಿಯೂ ನೀರು ಸಿಗುತ್ತಿಲ್ಲ.
ತೆರೆದ ಬಾವಿಗಳು ನಮ್ಮಲ್ಲಿ ಇಲ್ಲ. ಜತೆಗೆ ಬಹುತೇಕ ಎಲ್ಲ ಕಡೆ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿಕೊಂಡಿರುವ ಕಾರಣ ಕಾಡು ಪ್ರಾಣಿಗಳಿಗೂ ಕುಡಿಯುವ ನೀರು ಸಿಗದಂತಾಗಿದೆ ಎಂದರು.
ಕುಡಿಯುವ ನೀರಿಗಾಗಿ ತೋಟಗಳಿಗೆ ಬರುವ ಜಿಂಕೆ, ಕಡವೆ, ನವಿಲು, ಕಾಡು ಹಂದಿಗಳು ತೋಟಗಳಲ್ಲಿನ ಬೆಳೆಗಳನ್ನು ಹಾಳು ಮಾಡುತ್ತಿದ್ದು ರೈತರಿಗೂ ಹಾನಿ ಮಾಡುತ್ತಿವೆ. ಜತೆಗೆ ಕುಡಿಯುವ ನೀರಿಗಾಗಿ ಕಾಡು ಬಿಟ್ಟು ನಾಡಿಗೆ ಬರುವ ಪ್ರಾಣಿಗಳು ಕೃಷಿಹೊಂಡ, ಸಂಪಿಗೆ ಬಿದ್ದು ಸಾವನ್ನಪ್ಪುತ್ತಿವೆ.
ಇದಲ್ಲದೆ ಬೀದಿ ನಾಯಿಗಳ ದಾಳಿಗೂ ಸಿಲುಕಿ ಸಾವನ್ನಪ್ಪುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದೊಳಗೆ ಸಣ್ಣ ಗುಂಡಿ ತೆಗೆದು ಪಾಲಿಥೀನ್ ಪೇಪರ್ ಹೊದಿಸಿ ಅಥವಾ ಸಿಮೆಂಟ್ ನ ರಿಂಗ್ ತೊಟ್ಟಿ ಅಳವಡಿಸಿ ಅದಕ್ಕೆ ಪಾಲಿಥೀನ್ ಪೇಪರ್ ಹೊದಿಸಿ ಅದರಲ್ಲಿ ನೀರು ಬಿಟ್ಟರೆ ಕಾಡು ಪ್ರಾಣಿಗಳಿಗೆ ಅನುಕೂಲ ಆಗುತ್ತದೆ ಎಂದು ಮನವಿ ಮಾಡಿದರು.








