Sidlaghatta : ಶಿಡ್ಲಘಟ್ಟ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ಸಮಿತಿ ವತಿಯಿಂದ ಮಂಗಳವಾರ ಪರಂಪರೆ ಕೂಟ (ಹೆರಿಟೇಜ್ ಕ್ಲಬ್), ಎನ್.ಎಸ್.ಎಸ್ ಹಾಗೂ ವಿವಿಧ ಸಮಿತಿಗಳ ಆಶ್ರಯದಲ್ಲಿ ಸಾಂಪ್ರದಾಯಿಕ ಉಡುಗೆ ಜಾಥಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಮ್ಮಿಕೊಂಡಿದ್ದರು.
ಎಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ಡೋಲು, ತಮಟೆ ಮುಂತಾದ ವಾದ್ಯಗಳನ್ನು ಬಾರಿಸುತ್ತಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ದಿಬ್ಬೂರಹಳ್ಳಿ ಮಾರ್ಗವಾಗಿ ಕೋಟೆ ವೃತ್ತದವರೆಗೂ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಧ್ಯಾಪಕ ಹಾಘೂ ಕಾರ್ಯಕ್ರಮ ಸಂಚಾಲಕ ಡಾ. ಷಫೀ ಅಹಮದ್, “ಸಾಂಪ್ರದಾಯಿಕ ಉಡುಗೆ ಜಾಥಾ ಕಾರ್ಯಕ್ರಮವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಜನತೆಗೆ ಪರಿಚಯಿಸುವ ಮಹತ್ವದ ಹೆಜ್ಜೆಯಾಗಿದೆ. ಇದರ ಮೂಲ ಉದ್ದೇಶ ನಮ್ಮ ಭಾರತೀಯ, ವಿಶೇಷವಾಗಿ ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವಕ-ಯುವತಿಯರಿಗೆ ತಿಳಿಸುವುದು. ಕರ್ನಾಟಕದ ಸಂಸ್ಕೃತಿಯು ಯಕ್ಷಗಾನ, ಜಾನಪದ ಕಲೆಗಳು, ಹೊಯ್ಸಳ-ವಿಜಯನಗರ ವಾಸ್ತುಶಿಲ್ಪಗಳೊಂದಿಗೆ ತುಂಬಿದೆ. ಈ ಜಾಥಾ ಮೂಲಕ ಈ ಪರಂಪರೆಗಳನ್ನು ಇಂದಿನ ಜನತೆಗೆ ತಲುಪಿಸುವುದು ಉದ್ದೇಶ. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ಬೋಧಿಸುವಲ್ಲಿ ಸಹಾಯ ಮಾಡುತ್ತದೆ” ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಮುರಳಿ ಆನಂದ್, ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಆದಿನಾರಾಯಣ್, ಉಪನ್ಯಾಸಕರಾದ ಡಾ.ಶಿವಶಂಕರಿ, ಡಾ.ಎಂ.ಸುನೀತಾ, ಡಾ.ಜ್ಯೋತಿ, ಡಾ.ಶ್ರೀನಿವಾಸ, ಮಹಮ್ಮದ್ ಸಾದತ್, ರಮೇಶ್ ಹಾಜರಿದ್ದರು.








