Sidlaghatta : ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ (Government High School) 1980 – 81 ರ Batch ವಿದ್ಯಾರ್ಥಿಗಳು ಒಗ್ಗೂಡಿ, 40 ವರ್ಷಗಳ ನಂತರ ತಮ್ಮ ಬದುಕನ್ನು ರೂಪಿಸಿದ ಗುರುಗಳನ್ನು ಅವರಿರುವಲ್ಲಿಗೇ ಹೋಗಿ ಗೌರವಿಸಿದ್ದಾರೆ.
ವಿಶೇಷವೆಂದರೆ ಸರ್ಕಾರಿ ಪ್ರೌಢಶಾಲೆಯ 1980 – 81 ರ ಬ್ಯಾಚ್ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿದ್ದು, ಬೆಂಗಳೂರು ನಗರ ಸೇರಿದಂತೆ ವಿವಿದೆಡೆ ಹರಡಿದ್ದಾರೆ. ಅವರೆಲ್ಲರೂ ಒಗ್ಗೂಡಿ 40 ವರ್ಷಗಳ ಹಿಂದೆ ತಮ್ಮ ಜೀವನದ ಗತಿ ಬದಲಿಸಿದ್ದ ಪ್ರಾಂಶುಪಾಲ ಪಿ.ಎಸ್.ರವೀಂದ್ರನಾಥ್ ಸೇರಿದಂತೆ ಆದರಣೀಯ ಶಿಕ್ಷಕರನ್ನು ಖುದ್ದಾಗಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಹಳೆಯ ಮಧುರ ನೆನಪುಗಳನ್ನು ಮೆಲುಕುಹಾಕಿದರು. ಒಂದೇ ದಿನದಲ್ಲಿ ಪಿ.ಎಸ್.ರವೀಂದ್ರನಾಥ್ ಅವರನ್ನು ಯಲಹಂಕದಲ್ಲಿ, ಶಿಕ್ಷಕ ಸಿ.ನಾರಾಯಣಪ್ಪ ಅವರನ್ನು ಗೌರಿಬಿದನೂರಿನಲ್ಲಿ ಮತ್ತು ಶಿಕ್ಷಕಿ ಪ್ಯಾರೀ ಭಿ ಅವರನ್ನು ಚಿಕ್ಕಬಳ್ಳಾಪುರದಲ್ಲಿ ಭೇಟಿಯಾದರು.
“ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಿಸಿಕೊಂಡಿರುವ ಸನ್ಮಿತ್ರರ ಪ್ರಯತ್ನದಿಂದ ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋದಂತೆ ನಾನೂ ಈ ಪ್ರವಾಸದಲ್ಲಿ ಭಾಗಿಯಾಗಿದ್ದು ಜೀವನ ಧನ್ಯವೆನಿಸಿದೆ. ಈ ಸಂದರ್ಭದಲ್ಲಿ ಎಲ್ಲರೂ ಹಳೆಯ ಘಟನೆಗಳನ್ನು, ಸ್ವಾರಸ್ಯಕರ ಪ್ರಸಂಗಗಳನ್ನು ನೆನಪಿಸಿಕೊಂಡಿದ್ದು ನಮ್ಮನ್ನೆಲ್ಲಾ 80ರ ದಶಕದ ಕಾಲಕ್ಕೆ ಕೊಂಡೊಯ್ದಿತು. ಎಲ್ಲರಿಗೂ ಅದೆಷ್ಟು ನೆನಪಿನ ಶಕ್ತಿ, ಯಾವುದನ್ನೂ ಮರೆತಿಲ್ಲ ಎಂಬುದು ನೋಡಿ ರೋಮಾಂಚನವಾಯಿತು.”
“ಗುರುಗಳಾದ ಪಿ.ಎಸ್. ರವೀಂದ್ರನಾಥ್ ಅವರ ಸಂಪರ್ಕ ನಿರಂತರವಾಗಿದ್ದರೂ, ಸಿ.ನಾರಾಯಣಪ್ಪ ಮತ್ತು ಪ್ಯಾರೀ ಭೀ ಮೇಡಂ ಎಲ್ಲಿದ್ದಾರೆಂಬುದು ನನಗೆ ಗೊತ್ತಾಗಲು 40 ವರ್ಷಗಳು ಬೇಕಾಯಿತು. ನನ್ನ ಸುದೀರ್ಘ ಅಭಿಲಾಷೆ ಕೈಗೂಡಲು ನೆರವಾದ ಸುರೇಶ್, ಚನ್ನಕೇಶವ, ಡಾ.ವೆಂಕಟೇಶ್, ತ್ಯಾಗರಾಜ್, ವೀರಪ್ಪ, ಸಾವಿತ್ರಿ, ಉಮಾ, ಶ್ರೀನಿವಾಸ್ ಅವರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ನಮ್ಮ ಈ ಸಂಪರ್ಕ ಹೀಗೆ ನಿರಂತರವಾಗಿರಲಿ ಎಂದು ಆಶಿಸುವೆ” ಎನ್ನುತ್ತಾರೆ ಹಿರಿಯ ಪತ್ರಕರ್ತ ಪ್ರಕಾಶ್ ಚಂದ್ರ.