Sidlaghatta : “ನನ್ನ ಕೈಯಲ್ಲಿ ಈ ಮಾನಸಿಕ ಹಿಂಸೆ ತಡೆದುಕೊಳ್ಳಲು ಆಗುತ್ತಿಲ್ಲ, ದಯವಿಟ್ಟು ಈ ಒಂದು ತಿಂಗಳು ನನ್ನನ್ನು ಬಿಟ್ಟುಬಿಡಿ…” – ಇದು ಶಿಡ್ಲಘಟ್ಟದ ಅರಣ್ಯಾಧಿಕಾರಿ ಪೂರ್ವಿಕರಾಣಿ ಅವರು ಆರ್.ಟಿ.ಐ ಕಾರ್ಯಕರ್ತರೊಬ್ಬರ ಮುಂದೆ ಅಳಲು ತೋಡಿಕೊಂಡಿರುವ ಮಾತುಗಳು. ಈ ಸಂಭಾಷಣೆಯ ಆಡಿಯೋ ಈಗ ತಾಲ್ಲೂಕಿನಾದ್ಯಂತ ಸಂಚಲನ ಮೂಡಿಸಿದೆ.
ಏನಿದು ಘಟನೆ?
ಆರ್.ಟಿ.ಐ ಕಾರ್ಯಕರ್ತ ವಿಜಯ್ ಕುಮಾರ್ ಅವರು, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡದವರಿಗೂ ಸಂಬಳ ನೀಡಲಾಗುತ್ತಿದೆ ಎಂಬ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಲು ಅಧಿಕಾರಿ ಪೂರ್ವಿಕರಾಣಿ ಅವರಿಗೆ ಕರೆ ಮಾಡಿದ್ದರು. ಈ ವೇಳೆ ಅಧಿಕಾರಿ ತಾವು ಅನುಭವಿಸುತ್ತಿರುವ ಯಾತನೆಯನ್ನು ಬಿಚ್ಚಿಟ್ಟಿದ್ದಾರೆ.
ಅಧಿಕಾರಿಯ ಅಳಲು:
“ಕೆಲಸ ಮಾಡದ ಮೂವರನ್ನು ನಾನು ಕೆಲಸದಿಂದ ತೆಗೆದಿದ್ದೆ. ಆದರೆ 10-15 ಜನ ಜನಪ್ರತಿನಿಧಿಗಳು ಫೋನ್ ಮಾಡಿ ಒತ್ತಡ ಹಾಕಿದರು. ವಿಧಿಯಿಲ್ಲದೆ ಅವರನ್ನು ಮತ್ತೆ ಕೆಲಸಕ್ಕೆ ಇಟ್ಟುಕೊಂಡು ಸಂಬಳ ನೀಡುವ ‘ಸರ್ಕಸ್’ ಮಾಡಬೇಕಾಗಿದೆ. ಕಳೆದ 8 ತಿಂಗಳಿಂದ ನಾನು ಅನುಭವಿಸುತ್ತಿರುವ ನೋವು ನನಗೆ ಗೊತ್ತು. ಜನಪ್ರತಿನಿಧಿಗಳ ಕಾಟ ಒಂದು ಕಡೆಯಾದರೆ, ನನ್ನ ಸಿಬ್ಬಂದಿಯೇ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳಾ ಅಧಿಕಾರಿಗಳ ಮೇಲೆ ಸರಣಿ ಒತ್ತಡ:
ಈ ಹಿಂದೆ ಪೌರಾಯುಕ್ತರಿಗೂ ಇದೇ ರೀತಿ ಬೆದರಿಕೆ ಹಾಕಿದ ಪ್ರಕರಣ ನಡೆದಿತ್ತು. ಈಗ ಅರಣ್ಯಾಧಿಕಾರಿಯ ಸರದಿ. ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೇ? ಅಕ್ರಮಗಳನ್ನು ಮಾಡಲು ರಾಜಕಾರಣಿಗಳು ಅಧಿಕಾರಿಗಳ ಮೇಲೆ ಸವಾರಿ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.








