26.7 C
Sidlaghatta
Thursday, June 19, 2025

ಶಿಡ್ಲಘಟ್ಟದ “ಗೌಡನ ಕೆರೆ” ಕಟ್ಟಿಸಿದ್ದ ಶಿವನೇಗೌಡ ಹೆಸರಿರುವ ಶಾಸನ ಪತ್ತೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಆಗ್ನೇಯ ದಿಕ್ಕಿನಲ್ಲಿರುವ “ಗೌಡನ ಕೆರೆ”ಗೆ ಸುಮಾರು ಐದು ಶತಮಾನಗಳ ಇತಿಹಾಸವಿದೆ. ಶಿಡ್ಲಘಟ್ಟ ನಗರದ ನಿರ್ಮಾತೃ ಹಲಸೂರಮ್ಮನ ಮಗ ಶಿವನೇಗೌಡ ಈ ಕೆರೆಯನ್ನು ಕಟ್ಟಿಸಿದ್ದರಿಂದಾಗಿ ಇದಕ್ಕೆ “ಗೌಡನ ಕೆರೆ” ಎಂಬ ಹೆಸರು ಬಂತೆಂದು ಪ್ರತೀತಿಯಿದೆ.

ಶಿವನೇಗೌಡರು 47 ವರ್ಷಗಳ ಕಾಲ ಈ ಊರನ್ನು ಆಳಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ. ಇದೀಗ ಶಿವನೇಗೌಡರ ಹೆಸರಿರುವ ಶಾಸನ ತಾಲ್ಲೂಕಿನ ಸೊಣ್ಣೇನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಪತ್ತೆಯಾಗಿದೆ. ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಇದುವರೆಗೂ ಪ್ರಕಟವಾಗದಿರುವ ಈ ಶಾಸನವನ್ನು ಪತ್ತೆಹಚ್ಚಿರುವರು. ಕನ್ನಡ ಲಿಪಿ, ತೆಲುಗು ಭಾಷೆಯಲ್ಲಿರುವ ಈ ಶಾಸನವನ್ನು ಕ್ರಿ.ಶ. 1590 ರಲ್ಲಿ ಬರೆಯಲಾಗಿದೆ. ಆಗ ವಿಜಯನಗರ ಸಾಮ್ರಾಜ್ಯವನ್ನು ವೆಂಕಟಪತಿರಾಯರು ಆಳುತ್ತಿದ್ದರು. ಅವರ ಸಾಮಂತರಾಗಿ ಸುಗುಟೂರು ಪ್ರಾಂತ್ಯವನ್ನು ಇಮ್ಮಡಿ ತಮ್ಮಪ್ಪಗೌಡರು ಆಳ್ವಿಕೆ ನಡೆಸುವಾಗ, ಶಿಡ್ಲಘಟ್ಟ ಪ್ರಾಂತ್ಯವನ್ನು ಆಳಿ, ಅಪಾರ ಜನಸೇವೆ ಮಾಡಿ, ಉತ್ತಮ ಆಡಳಿತ ನಡೆಸಿ ದೈವಸನ್ನಿಧಿಗೆ ಸೇರಿರುವ ಶಿವನೇಗೌಡರ ನೆನಪಿನಲ್ಲಿ ಅವರ ಅನುಯಾಯಿಗಳಾದ ನಾಣಪ್ಪಗೌಡರ ಮಗ ಶಿಲೇಗೌಡರು, ಶಿವಸಮುದ್ರ ಎಂಬ ಕೆರೆಯನ್ನು ಜನೋಪಕಾರಕ್ಕಾಗಿ ಕಟ್ಟಿಸಿ ದಾನ ಮಾಡಿರುವುದಾಗಿ ಇದರಲ್ಲಿ ಬರೆದಿರುವರು.

“ಈ ಶಾಸನವನ್ನು ಕ್ರಿ.ಶ. 1590 ರ ಜುಲೈ ತಿಂಗಳ 21 ನೇ ತಾರೀಖಿನ ಮಂಗಳವಾರ ಸೂರ್ಯ ಗ್ರಹಣದ ದಿನದಂದು ಬರೆಯಲಾಗಿದೆ. ಗ್ರಹಣದ ದಿನ ದಾನ ಕೊಟ್ಟರೆ ಎಲ್ಲರಿಗೂ ಒಳ್ಳೆಯದಾಗುತ್ತದೆಂಬ ನಂಬಿಕೆ ನಮ್ಮ ಹಿರಿಯರದ್ದು. ಹಾಗಾಗಿ ಜನಾನುರಾಗಿ ಆಡಳಿತಗಾರ ಶಿವನೇಗೌಡರ ನೆನಪಿನಲ್ಲಿ ಒಂದು ಕೆರೆಯನ್ನು ಕಟ್ಟಿಸಿ ದಾನ ಮಾಡಲಾಗಿದೆ” ಎಂದು ಶಾಸನತಜ್ಞ ಕೆ.ಧನಪಾಲ್ ತಿಳಿಸಿದರು.

ಇತಿಹಾಸ :

ಶಿಡ್ಲಘಟ್ಟದ ಸ್ಥಳ ಐತಿಹ್ಯದ ಪ್ರಕಾರ ಕ್ರಿ.ಶ.1514 ರಲ್ಲಿ ಉಜ್ಜನಿ ಮೂಲದ ಕೆಂಪೇಗೌಡ ವೆಲ್ಲೂರಿನ ಕದನದಲ್ಲಿ ನಿಧನನಾದ ಮೇಲೆ, ಗರ್ಭಿಣಿಯಾಗಿದ್ದ ಆತನ ಮಡದಿ ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ, ಕ್ರಿ.ಶ.1526 ರಲ್ಲಿ ವ್ಯವಸ್ಥಿತವಾಗಿ ಊರನ್ನು ಕಟ್ಟಿಸಿ, ತನ್ನ ಮಾವನಾದ ಸಿಡ್ಲಗೌಡನ ಹೆಸರಿನಿಂದ “ಸಿಡ್ಲ ಘಟ್ಟ” ಎಂದು ಕರೆದಳು. ತನ್ನ ಮಗ ಶಿವನೇಗೌಡರನ್ನು 1529 ರಲ್ಲಿ ಪಟ್ಟದ ಮೇಲೆ ಕೂರಿಸಿದಳು. ಶಿಡ್ಲಘಟ್ಟದ ನೈರುತ್ಯಕ್ಕಿರುವ “ಅಮ್ಮನಕೆರೆ”ಯನ್ನು ಹಲಸೂರಮ್ಮ, ಆಗ್ನೇಯ ದಿಕ್ಕಿನಲ್ಲಿರುವ “ಗೌಡನಕೆರೆ”ಯನ್ನು ಶಿವನೇಗೌಡರು ಕಟ್ಟಿಸಿದರು. ಅಮ್ಮನಕೆರೆಯ ಅಚ್ಚುಕಟ್ಟಿನಲ್ಲಿ ಈಗಲೂ ಶಿವನೇಗೌಡರ ಸಮಾಧಿಯನ್ನು ಕಾಣಬಹುದು.

ಶಾಸನ ಅಧ್ಯಯನದ ಸಂದರ್ಭದಲ್ಲಿ ಗ್ರಾಮಸ್ಥರಾದ ದೇವಪ್ಪ, ಪಿಳ್ಳಮುನಿಯಪ್ಪ, ಲೋಕೇಶ್, ಮುನಿಕೃಷ್ಣಪ್ಪ, ಅಂಬರೀಶ್, ಗಿರೀಶ, ದೇವರಾಜು, ಅರ್ಚಕ ಜಗನ್ನಾಥ್ ಸ್ವಾಮಿ ಹಾಜರಿದ್ದರು.

“ಗೌಡನ ಕೆರೆ” ಕಟ್ಟಿಸಿದ್ದ ಶಿವನೇಗೌಡ ಹೆಸರಿರುವ ಶಾಸನ ಪತ್ತೆ | Sidlaghatta | Chikkaballapur | Karnataka

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!