Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ನಿವೃತ್ತ ಉಪನ್ಯಾಸಕ ಆರ್.ಆಂಜನೇಯ ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ.
ಹಣ್ಣಾದ ಹಂತದಲ್ಲಿದ್ದ ಮತ್ತು ಮೂರನೇ ಹಂತದಲ್ಲಿದ್ದ ಒಟ್ಟಾರೆ 300 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ಸುಮಾರು ಎರಡೂವರೆ ಲಕ್ಷ ರೂ ನಷ್ಟವಾಗಿದೆ. ಆರ್.ಆಂಜನೇಯ ಅವರ ನಾಲ್ಕು ಎಕರೆ ಹಿಪ್ಪುನೇರಳೆ ತೋಟದಲ್ಲಿ ಒಂದು ಎಕರೆ ಸೊಪ್ಪಿಗೆ ದುಷ್ಕರ್ಮಿಗಳು ಶನಿವಾರ ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮತ್ತು ವಿಸ್ತರಣಾಧಿಕಾರಿ ಎಂ.ಸಿ.ಭಾರತಿ ಅವರು ಸೊಪ್ಪಿಗೆ ವಿಷ ಸಿಂಪಡನೆಯನ್ನು ದೃಢೀಕರಿಸಿದ್ದು, ಅದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ರೈತ ಪೋಲೀಸರಿಗೆ ದೂರು ನೀಡಿದ್ದಾರೆ.








