Home News ಬೃಹತ್ ಉದ್ಯೋಗ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಯುವಕರು ಭಾಗಿ

ಬೃಹತ್ ಉದ್ಯೋಗ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಯುವಕರು ಭಾಗಿ

0

Jangamakote Cross, Sidlaghatta, Chikkaballapur : ಅವಕಾಶಗಳನ್ನು ಸದುಪಯೋಗಪಡಿಸಿಕೊಂಡವರು ಬುದ್ಧಿವಂತರಾಗುತ್ತಾರೆ ಮತ್ತು ಅವರಿಗೆ ಮುಂದೆ ಅವಕಾಶಗಳನ್ನು ಸೃಷ್ಟಿಸುವ ಶಕ್ತಿಯೂ ಲಭಿಸುತ್ತದೆ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಜಂಗಮಕೋಟೆ ಕ್ರಾಸ್‌ನಲ್ಲಿರುವ ಜ್ಞಾನ ಜ್ಯೋತಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶನಿವಾರ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆ ಸಂಸ್ಥಾಪಕ ಬಿ.ಎಂ. ಮೂರ್ತಿ ಅವರ 25ನೇ ಪುಣ್ಯಸ್ಮರಣೆಯ ಸ್ಮರಣಾರ್ಥವಾಗಿ, ಉದ್ಯೋಗದಾತ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮೀಜಿಯವರ ಸಂದೇಶ: ಗ್ರಾಮೀಣ ಮಕ್ಕಳಿಗೆ ದುಡಿಯುವ ಛಲವಿದ್ದರೂ, ಸೂಕ್ತ ಅವಕಾಶಗಳು ಸಿಗುವುದು ಮುಖ್ಯ. ಈ ಉದ್ಯೋಗ ಮೇಳದ ಮೂಲಕ ಅವಕಾಶಗಳನ್ನು ಕಲ್ಪಿಸಲಾಗಿದೆ. ಯುವಕರು ದೊರೆತ ಉದ್ಯೋಗವನ್ನು ಅನುಭವಕ್ಕೆ ಸಿಕ್ಕ ಅವಕಾಶ ಎಂದು ತಿಳಿದುಕೊಳ್ಳಬೇಕು. ಆಲೋಚನೆ, ಯೋಜನೆ, ಬುದ್ಧಿಮತ್ತೆ, ಶ್ರಮ, ನಿಷ್ಠೆ ಮತ್ತು ಬದ್ಧತೆಯು ಯುವಜನರಲ್ಲಿರಬೇಕು. ಕಷ್ಟಪಟ್ಟವರು ಮಾತ್ರ ಜೀವನದಲ್ಲಿ ಏಳಿಗೆ ಸಾಧಿಸಬಲ್ಲರು ಎಂದು ಸ್ವಾಮೀಜಿಯವರು ನುಡಿದರು.

ಉದ್ಯೋಗದಾತ ಫೌಂಡೇಶನ್ ಮಾಹಿತಿ: ಉದ್ಯೋಗದಾತ ಫೌಂಡೇಶನ್ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಸುತ್ತಮುತ್ತಲಿನ 70 ಕಂಪನಿಗಳನ್ನು ಮೇಳಕ್ಕೆ ಕರೆಸಲಾಗಿದೆ. ಈ ಕಂಪನಿಗಳಿಗೆ 12 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಅವಶ್ಯಕತೆ ಇದೆ. ಈ ಭಾಗದ ಯುವಕರಿಗೆ ಉದ್ಯೋಗಕ್ಕಾಗಿ ಹೆಚ್ಚು ದೂರ ಹೋಗಬೇಕಾದ ಅಗತ್ಯವಿಲ್ಲ. ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮ, ಡಿ.ಎಡ್, ಬಿ.ಎಡ್, ಡಿ.ಫಾರ್ಮ, ಬಿ.ಫಾರ್ಮ ಸೇರಿದಂತೆ ಯಾವುದೇ ಪದವಿ ಹೊಂದಿರುವ ಯುವಕ/ಯುವತಿಯರಿಗೆ ಅವಕಾಶಗಳಿವೆ. ಕಂಪನಿಗೆ ಅಗತ್ಯವಿರುವ ಕೌಶಲಗಳ ಕೊರತೆಯಿದ್ದಲ್ಲಿ, ಅವುಗಳನ್ನು ಕಲಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಗ್ರಾಮೀಣ ಯುವಜನರು ಉತ್ತಮ ಉದ್ಯೋಗಿಗಳಾಗಿ ಬದುಕನ್ನು ರೂಪಿಸಿಕೊಳ್ಳಲಿ ಎಂಬುದೇ ಈ ಮೇಳದ ಉದ್ದೇಶವಾಗಿದೆ ಎಂದರು.

ಈ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 3,000ಕ್ಕೂ ಹೆಚ್ಚು ಯುವಕ ಯುವತಿಯರು ನೋಂದಾಯಿಸಿಕೊಂಡಿದ್ದರು.

ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಕೆ. ಗುಡಿಯಪ್ಪ, ಕಾರ್ಯದರ್ಶಿ ರಾಜೀವ್ ಕುಮಾರ್, ಜ್ಞಾನ ಜ್ಯೋತಿ ಶಾಲೆಯ ಪ್ರಾಂಶುಪಾಲೆ ಮನುಶ್ರೀ ರಾಜೀವ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್ ಸೇರಿದಂತೆ ಹಲವು ಗಣ್ಯರು ಹಾಗೂ ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Namma Sidlaghatta WhatsApp Channel

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version