Home News ನವ ವಿವಾಹಿತೆ ನೇಣಿಗೆ ಶರಣು, ವರದಕ್ಷಿಣೆ ಕಿರುಕುಳವೆಂದು ಕುಟುಂಬಸ್ಥರಿಂದ ದೂರು

ನವ ವಿವಾಹಿತೆ ನೇಣಿಗೆ ಶರಣು, ವರದಕ್ಷಿಣೆ ಕಿರುಕುಳವೆಂದು ಕುಟುಂಬಸ್ಥರಿಂದ ದೂರು

0
Sidlaghatta Jangamakote Newly Wed Death

Jangamakote, sidlaghatta : ನವವಿವಾಹಿತೆಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ.

ಮೃತಳನ್ನು ಗೌರಿಬಿದನೂರಿನ ಗಂಗಸಂದ್ರ ಮೂಲದ ಪ್ರೇಮಾ ಎನ್ನಲಾಗಿದ್ದು ಜಂಗಮಕೋಟೆಯ ಶಿವಕುಮಾರ್ ಎಂಬುವನೊಂದಿಗೆ ವರ್ಷದ ಹಿಂದಷ್ಟೇ ಮದುವೆಯಾಗಿತ್ತು.

ಮೃತಳ ಎದೆಯ ಮೇಲೆ ಹಾಕಿಸಿಕೊಂಡಿದ್ದ ಹಚ್ಚೆಯ ವಿಚಾರವಾಗಿ ದಂಪತಿಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ವರದಕ್ಷಿಣೆ ಕಿರುಕುಳವೂ ಆಕೆಯ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮೃತಳ ಕುಟುಂಬದವರು ನೀಡಿದ ದೂರಿನ ಆಧಾರದಲ್ಲಿ ಆಕೆಯ ಪತಿ ಶಿವಕುಮಾರನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾದ ಮೊದಲ ಮೂರು ತಿಂಗಳು ದಂಪತಿ ಸುಖವಾಗಿದ್ದರು. ಆದರೆ ಆ ನಂತರ ಪ್ರೇಮಾ ಎದೆಯ ಮೇಲೆ ಯುವಕನೊಬ್ಬನ ಹೆಸರಿನ ಹಚ್ಚೆ ಇರುವುದನ್ನು ಕಂಡು, ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅದು ಕೇವಲ ಸ್ನೇಹಿತನ ಹೆಸರು ಎಂದು ಪ್ರೇಮಾ ಹೇಳಿದ್ದರೂ ಶಿವಕುಮಾರ್ ಅದನ್ನು ಅನುಮಾನಿಸಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.

ಕೇವಲ ಹಚ್ಚೆ ವಿವಾದ ಮಾತ್ರವಲ್ಲದೆ, ವರದಕ್ಷಿಣೆ ತರುವಂತೆ ಶಿವಕುಮಾರ್ ಪ್ರೇಮಾ ಮೇಲೆ ನಿರಂತರವಾಗಿ ಹಲ್ಲೆ ಮಾಡುತ್ತಿದ್ದ ಎಂದು ಪ್ರೇಮಾ ತಾಯಿ ಶಕುಂತಲಾ ಆರೋಪಿಸಿದ್ದಾರೆ. ತಿಂಗಳ ಹಿಂದೆಯಷ್ಟೇ ಜಗಳವಾಡಿ ತವರು ಮನೆ ಸೇರಿದ್ದ ಪ್ರೇಮಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಿವಕುಮಾರ್ ಮತ್ತೆ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ತಿಂಗಳೊಳಗೆ ಪ್ರೇಮಾ ಮೃತಪಟ್ಟಿರುವುದು ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿದೆ. ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿತ್ತು. ಆಗಲೂ ಗಂಡನ ಮನೆಯವರು ಸರಿಯಾಗಿ ನೋಡಿಕೊಂಡಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version