Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಂಗಮಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ ಜೆ.ಎಂ.ಶ್ರೀನಿವಾಸ್ ಅವರು ಮಾತನಾಡಿದರು.
ಶಿಕ್ಷಕರಲ್ಲಿ ತಾಳ್ಮೆ, ಸದೃಢ ಮನಸ್ಸು ಅಗತ್ಯವಾಗಿ ಇರಬೇಕು. ಪ್ರಜ್ಞಾವಂತ ಶಿಕ್ಷಕರು ದೇಶದ ಆಸ್ತಿಯಂತಿದ್ದು ಶಿಕ್ಷಕರಲ್ಲಿ ಉತ್ತಮ ಮೌಲ್ಯಗಳು, ಗುಣಗಳನ್ನು ವಿದ್ಯಾರ್ಥಿಗಳು ಅಗತ್ಯವಾಗಿ ಅನುಕರಣೆ ಮಾಡುವಂತಾಗಬೇಕು, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರವಿದೆ. ಶಿಕ್ಷಕರಲ್ಲಿನ ಸಂಸ್ಕಾರ, ಸಂಸ್ಕೃತಿ, ಸಮಯಪಾಲನೆ, ಸೌಮ್ಯತೆ, ಪ್ರಾಮಾಣಿಕತೆಯಂತಹ ಗುಣಗಳನ್ನು ಯುವಪೀಳಿಗೆಗೆ ಧಾರೆಯೆರೆಯಬೇಕು. ಭವಿಷ್ಯಭಾರತದಲ್ಲಿನ ಉತ್ತಮ ಸಮಾಜದ ಅಭಿವೃದ್ಧಿಗೆ ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು ಮಾತನಾಡಿ, ಶಿಕ್ಷಕರು ಮತ್ತಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಮಕ್ಕಳನ್ನು ತಿದ್ದಿತೀಡುವ ಕಾರ್ಯಕ್ಕಾಗಿ ಶಿಕ್ಷಕರಲ್ಲಿ ತಾಳ್ಮೆ, ಮಕ್ಕಳಾಟಗಳನ್ನೆಲ್ಲಾ ತಡೆದುಕೊಳ್ಳುವ ಮನೋಧರ್ಮ, ಮಾತೃಹೃದಯವಿರಬೇಕು. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಮೂಲಕ ದೇಶಕಟ್ಟುವ ಕಾರ್ಯದಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ ಎಂದರು.
ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಉತ್ತಮ ಸಮಾಜವನ್ನು ನಿರ್ಮಿಸಿ, ಸುಸ್ಥಿತಿಯಲ್ಲಿಡಲು ಶಿಕ್ಷಕರ ಕಾರ್ಯವು ಮಹತ್ತರವಾದುದು. ಯುವಪೀಳಿಗೆಯನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳುವ ಕಾರ್ಯವಾಗಬೇಕಿದೆ ಎಂದರು.
ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ 22 ವರ್ಷಗಳ ಕಾಲಸೇವೆಸಲ್ಲಿಸಿ, ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾಗಿ ಪದೋನ್ನತಿಪಡೆದ ಬೈರಾರೆಡ್ಡಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತ ಮುಖ್ಯಶಿಕ್ಷಕ ಎನ್.ಎಂ.ಶ್ರೀನಿವಾಸ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಪ್ರಧಾನಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಶಿಕ್ಷಣಸಂಯೋಜಕ ಇ.ಭಾಸ್ಕರಗೌಡ, ಬಿಆರ್ಸಿ ಕ್ಷೇತ್ರಸಮನ್ವಯಾಧಿಕಾರಿ ತ್ಯಾಗರಾಜು, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ರಾಜೇಶ್ವರಿ ಉಜ್ರೇಕರ್, ಶಿಕ್ಷಕಿ ನಾಗರತ್ನ, ಶಿಕ್ಷಕ ಸಿ.ಬಿ.ಪ್ರಕಾಶ್ ಮಾಥನಾಡಿದರು. ಗ್ರಾಮಪಂಚಾಯಿತಿ ಸದಸ್ಯೆ ಸುಮಾ, ಮಾಲಾ, ನಿವೃತ್ತಶಿಕ್ಷಕ ಎಂ.ನಾರಾಯಣಸ್ವಾಮಿ, ಎಂ.ಎನ್.ಮಂಜುನಾಥ್, ಎಸ್.ಎಂ.ಮುನಿಯಪ್ಪ, ಚಂದ್ರಶೇಖರ್, ಸಿಆರ್ಪಿ ರಮೇಶ್ಕುಮಾರ್, ವಿವಿಧ ಶಾಲೆಗಳ ಶಿಕ್ಷಕರು, ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.