Sidlaghatta : ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಶ್ರಮದ ಫಲವಾಗಿ ಇಂದು ನಾವು ವ್ಯವಸ್ಥಿತ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮದ್ ರೋಷನ್ ಷಾ ತಿಳಿಸಿದರು.
ನಗರದ JMFC ನ್ಯಾಯಾಲಯದಲ್ಲಿ ಬುಧವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ವಿವಿಧ ಭಾಷೆ, ಸಂಸ್ಕೃತಿ, ಆಚರಣೆಗಳಿಂದ ಕೂಡಿದ ದೇಶವಾಗಿದ್ದು, ಇಂತಹ ವೈವಿಧ್ಯಮಯ ಸಮಾಜದಲ್ಲಿ ಸಮಾನತೆ ಹಾಗೂ ನ್ಯಾಯವನ್ನು ಸ್ಥಾಪಿಸಲು ಅಂಬೇಡ್ಕರ್ ಅವರು ಮಹತ್ವದ ಪಾತ್ರ ವಹಿಸಿದ್ದರು. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ಸಮಾಜದಲ್ಲಿ ಉನ್ನತ ಸ್ಥಾನಕ್ಕೆರಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟವೇ ಕಾರಣವಾಗಿದೆ. ಕೇವಲ ಕಾನೂನುಗಳಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಿಲ್ಲ, ಜನರ ಮನೋಭಾವ ಬದಲಾಗಬೇಕು. ಪ್ರತಿಯೊಬ್ಬರೂ ಮನುಷ್ಯನನ್ನು ಮನುಷ್ಯನಾಗಿ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯುವಕರು ತಮ್ಮ ಗುರಿ ಸಾಧನೆಗೆ ಗಮನಹರಿಸಬೇಕು. ಸಮಾಜದಲ್ಲಿರುವ ಜಾತಿ, ಧರ್ಮ ಆಧಾರಿತ ಭೇದಭಾವಗಳಿಗೆ ಒಳಗಾಗದೆ, ವಿದ್ಯಾಭ್ಯಾಸ ಮತ್ತು ಸಾಧನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಯನ್ನು ತಕ್ಷಣ ನಂಬದೆ, ಪರಿಶೀಲಿಸುವುದು ಅಗತ್ಯ ಎಂದು ಎಚ್ಚರಿಸಿದರು.
ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಅನೇಕ ಪದವಿಗಳು ಹಾಗೂ ಜ್ಞಾನವನ್ನು ಸಂಪಾದಿಸಿ, ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ. ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ ಮತ್ತು ಕಷ್ಟಗಳನ್ನು ಮೀರಿ ಅವರು ಉನ್ನತ ಶಿಕ್ಷಣ ಪಡೆದು ದೇಶಕ್ಕೆ ದಿಕ್ಕು ತೋರಿದ ಮಹಾನ್ ನಾಯಕ. ಅವರ ಜೀವನವೇ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದ್ದು, ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಅವರು ಮಾಡಿದ ಸೇವೆ ಅಮೂಲ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸುಕನ್ಯಾ.ಸಿ.ಎಸ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ರಂಜಿತಾ.ಎಸ್ ಹಾಜರಿದ್ದರು.








