Sidlaghatta : ಶಿಡ್ಲಘಟ್ಟ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ‘ಭಾರತಾಂಬೆ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ಕಚೇರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ. ವೈ. ನವೀನ್ ಭಟ್ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಸ್ಥೆಗೆ ಮಾರ್ಗದರ್ಶನ
ಸಂಸ್ಥೆಯ ಒಟ್ಟಾರೆ ಕಾರ್ಯಚಟುವಟಿಕೆಗಳನ್ನು ಸಿಇಒ ವೀಕ್ಷಿಸಿದರು. ನಂತರ ಮಾತನಾಡಿದ ಅವರು, ಸದಸ್ಯತ್ವವನ್ನು ಹೆಚ್ಚಿಸುವುದು, ವ್ಯವಹಾರವನ್ನು ವಿಸ್ತರಿಸುವುದು ಹಾಗೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ರೈತರಿಗೆ ಗುಣಮಟ್ಟದ ಸೇವೆಗಳನ್ನು ಒದಗಿಸುವ ಕುರಿತು ಅವರು ಸಂಸ್ಥೆಯ ಪದಾಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ರೈತಪರ ಪರಿಕರಗಳ ಮಾಹಿತಿ
ಈ ಭೇಟಿಯ ವೇಳೆ ರೈತರಿಗೆ ಅವಶ್ಯಕವಿರುವ ಕೃಷಿ ಪರಿಕರಗಳ ಬಗ್ಗೆ ಸಿಇಒ ಮಾಹಿತಿ ಪಡೆದರು. ಟಾರ್ಪಲ್, ಮ್ಯಾಟ್, ಚಾಪ್ ಕಟ್ಟರ್, ಮಿಲ್ಕ್ ಮಿಷನ್ಸ್, ಶೇಡ್ ನೆಟ್ ಮತ್ತು ವೀಡ್ ಮ್ಯಾಟ್ ಸೇರಿದಂತೆ ವಿವಿಧ ಉಪಕರಣಗಳ ಲಭ್ಯತೆ ಮತ್ತು ವಿತರಣೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಕಲೆಹಾಕಿದರು.
ಈ ಪರಿಶೀಲನಾ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಹಾಗೂ ತಾಲ್ಲೂಕು ಪಂಚಾಯಿತಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.








