Sidlaghatta : ಹಕಾರಿ ವ್ಯವಸ್ಥೆಯು ನೆನ್ನೆ ಮೊನ್ನೆ ಹುಟ್ಟಿದ್ದಲ್ಲ. ಈ ಭೂಮಿ ಮೇಲೆ ಮನುಷ್ಯ ಹುಟ್ಟಿದಾಗಿನಿಂದಲೂ ಸಹಕಾರಿ ವ್ಯವಸ್ಥೆಯು ಒಂದಲ್ಲ ಒಂದು ರೂಪದಲ್ಲಿ ಬಂದಿದೆ. ಕಳೆದ ಹಲವು ವರ್ಷಗಳಿಂದ ಒಂದು ವ್ಯವಸ್ಥೆಯ ರೂಪ ಪಡೆದಿದೆ ಎಂದು KMF ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಗರದ KOCHIMUL ಶಿಬಿರ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷ, ಸಿಇಒಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ದೇಶದಲ್ಲಿ ಸಹಕಾರಿ ವ್ಯವಸ್ಥೆಯು ಬಲಿಷ್ಠವಾಗಿ ಬೆಳೆದಿದ್ದು ಗ್ರಾಮೀಣ ಭಾಗದಲ್ಲಿ ರೈತರು, ಕೃಷಿಯ ಅಭಿವೃದ್ದಿಗೆ ಪೂರಕವಾಗಿದೆ. ಕೊರೊನಾದಂತ ಸಂಕಷ್ಟ ಕಾಲದಲ್ಲೂ ಸಹಕಾರಿ ವ್ಯವಸ್ಥೆಯ ಹೈನುಗಾರಿಕೆ ಕೆಲಸ ನಿಂತಿರಲಿಲ್ಲ. ಇದು ಸಹಕಾರಿ ವ್ಯವಸ್ಥೆಯ ಅನಿವಾರ್ಯ, ಪ್ರಭಾವವನ್ನು ಸೂಚಿಸುತ್ತದೆ ಎಂದರು.
ಡೇರಿಗಳು ಇಂದು ಆಯಾ ಗ್ರಾಮದಲ್ಲಿ ರೈತರು, ಹೈನುಗಾರರ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಹಾಗಾಗಿ ಡೇರಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಿಇಒ ಅವರು ಪಕ್ಷಾತೀತಿ, ಜಾತ್ಯಾತೀತವಾಗಿ ಕೆಲಸ ಮಾಡಬೇಕು, ನೀತಿ ನಿಯಮಗಳನ್ನು ಪಾಲಿಸುವ ಮೂಲಕ ಸಹಕಾರಿ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕೆಂದರು.
ಈ ನಿಟ್ಟಿನಲ್ಲಿ ನಡೆಯುತ್ತಿರುವ ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಿ, ತಮ್ಮ ಕಾರ್ಯದಲ್ಲಿ ಇನ್ನಷ್ಟು ಕಾರ್ಯಪರತೆಯನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ಜಿಲ್ಲಾ ಯೂನಿಯನ್ನಿಂದ ಈ ವಾರ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಿಲ್ಲೆಯ ಎಲ್ಲ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಹಕಾರ ಸಂಘಗಳ ಕಟ್ಟಡದ ಬಳಿ ಜಾಗ ಇಲ್ಲದಿದ್ದಲ್ಲಿ ಸರಕಾರಿ ಶಾಲಾ ಆವರಣದಲ್ಲಾಗಲಿ ಸಸಿಗಳನ್ನು ನೆಡುವ ಕಾರ್ಯವನ್ನು ನಡೆಸಲಿದ್ದೇವೆ ಎಂದು ಹೇಳಿದರು.
ತಾಲ್ಲೂಕಿನ ಕೆಲ ಡೇರಿಗಳಿಂದ ಸಹಕಾರ ಶಿಕ್ಷಣ ನಿಧಿಯ ಚೆಕ್ ನ್ನು ಸಹಕಾರ ಮಹಾ ಮಂಡಳ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.
DCC ಬ್ಯಾಂಕ್ ನಿರ್ದೇಶಕ ಡಾಲ್ಫಿನ್ ಸ್ಕೂಲ್ ನಾಗರಾಜ್, ಜಿಲ್ಲಾ ಯೂನಿಯನ್ ನಿರ್ದೇಶಕ ಎಂ.ಮುರಳಿ, ತಿಪ್ಪೇನಹಳ್ಳಿ ಟಿ.ಎಲ್.ಅಂಬರೀಷ್, ಪಿ.ಎನ್.ವೇಣುಗೋಪಾಲ್, ಚನ್ನಬೈರೇಗೌಡ, ಸುರೇಂದ್ರರೆಡ್ಡಿ, ಚಿಮುಲ್ನ ಉಪ ವ್ಯವಸ್ಥಾಪಕ ಡಾ.ಬಿ.ಆರ್.ರವಿಕಿರಣ್, ಜಿಲ್ಲಾ ಯೂನಿಯನ್ನ ಸಿಇಒ ಅಮೃತ ಬಿಸನಾಳ, ಸಹಕಾರ ಶಿಕ್ಷಕ ಎನ್.ನಾಗಭೂಷಣ್, ವ್ಯವಸ್ಥಾಪಕ ಬಿ.ವಿ.ಪ್ರದೀಪ್, ವಿಸ್ತರಣಾಧಿಕಾರಿಗಳಾದ ಜಯಚಂದ್ರ, ವಿ.ಶ್ರೀನಿವಾಸ್, ಕೆ.ನಾರಾಯಣಸ್ವಾಮಿ, ಶಂಕರ್ ಕುಮಾರ್, ಶಶಿಕುಮಾರ್ ಹಾಜರಿದ್ದರು.