Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಭೂಮಾಪಕರು ಶಾಸಕ ಬಿ. ಎನ್. ರವಿಕುಮಾರ್ ಅವರ ಗೃಹ ಕಚೇರಿಯಲ್ಲಿ ಬುಧವಾರ ಭೇಟಿ ನೀಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ 2002 ರಿಂದಲೂ ಸೇವೆಯಲ್ಲಿರುವ ಈ ಭೂಮಾಪಕರು, ಸರ್ಕಾರದ ಬಹುತೇಕ ಎಲ್ಲ ಪ್ರಮುಖ ಯೋಜನೆಗಳನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯದ ಕಂದಾಯ ಇಲಾಖೆಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿರುವ ಪರವಾನಗಿ ಭೂಮಾಪಕರು ತಮ್ಮ ದಶಕಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಫೆಬ್ರವರಿ 28 ರಿಂದಲೇ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆಯ ಹಾದಿ ಹಿಡಿದಿರುವ ಇವರಿಂದಾಗಿ, ರಾಜ್ಯದ ಸಾವಿರಾರು ರೈತರ ಭೂ-ಸಂಬಂಧಿತ ಕೆಲಸಗಳು ವಿಳಂಬವಾಗುತ್ತಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುವ
“ನಾವು ಕೇವಲ ಖಾಸಗಿ ಸರ್ವೇ ಕೆಲಸಗಳಿಗಷ್ಟೇ ಸೀಮಿತವಾಗಿಲ್ಲ. 11ಇ ನಕ್ಷೆ ಸಿದ್ಧಪಡಿಸುವುದು, ತತ್ಕಾಲ್ ಪೋಡಿ, ಕೆರೆ ಮತ್ತು ಕಾಲುವೆಗಳ ಅಳತೆ ಹಾಗೂ ಅಕ್ರಮ-ಸಕ್ರಮದಂತಹ ಜವಾಬ್ದಾರಿಯುತ ಸರ್ಕಾರಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಆದರೆ, ಇಷ್ಟೆಲ್ಲಾ ಕೆಲಸ ಮಾಡಿದರೂ ನಮಗೆ ಕನಿಷ್ಠ ವೇತನವಾಗಲಿ ಅಥವಾ ಸೇವಾ ಭದ್ರತೆಯಾಗಲಿ ಇಲ್ಲದಿರುವುದು ಶೋಚನೀಯ” ಎಂದು ಪರವಾನಿಗೆ ಭೂಮಾಪನ ತಾಲ್ಲೂಕು ಅಧ್ಯಕ್ಷ ಬಿಟಿ ವೆಂಕಟೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಭೂಮಾಪನ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಈ ಸಿಬ್ಬಂದಿಗಳನ್ನು ಸರ್ಕಾರ ಕಾಯಂ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ. ದರ್ಖಾಸ್ತು, ಪೋಡಿ ಮುಕ್ತ, ಪೋಡಿ ಆಂದೋಲನ ಮತ್ತು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ “ಸ್ವಾಮಿತ್ವ” ಯೋಜನೆಯಡಿ ಹಗಲಿರುಳು ಶ್ರಮಿಸಿದರೂ, ಇವರಿಗೆ ಸರಿಯಾದ ಸಂಭಾವನೆ ದೊರೆಯುತ್ತಿಲ್ಲ. ಈ ತಾರತಮ್ಯವನ್ನು ಹೋಗಲಾಡಿಸಲು ಕೂಡಲೇ ವಿಶೇಷ ನೇಮಕಾತಿ ಮೂಲಕ ಇವರನ್ನು ಸರ್ಕಾರಿ ಸೇವೆಗೆ ಸೇರಿಸಿಕೊಳ್ಳಬೇಕು ಎಂಬ ಬೇಡಿಕೆ ಬಲವಾಗಿ ಕೇಳಿಬರುತ್ತಿದೆ.
ಪರವಾನಗಿ ಭೂಮಾಪಕರ ಈ ಮುಷ್ಕರದಿಂದಾಗಿ ಪೋಡಿ, ವಿಭಜನೆ ಹಾಗೂ ಜಮೀನು ಅಳತೆಯ ನೂರಾರು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇದರಿಂದ ರೈತರು ಸಾಲ ಸೌಲಭ್ಯ ಪಡೆಯಲು ಮತ್ತು ಜಮೀನು ಕ್ರಯ-ವಿಕ್ರಯ ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಇವರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈಗಾಗಲೇ ರಾಜ್ಯದ ವಿವಿಧ ಶಾಸಕರಿಗೆ ಮನವಿ ಸಲ್ಲಿಸಿರುವ ಸಂಘವು, ನ್ಯಾಯ ಸಿಗುವವರೆಗೂ ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಸಂದರ್ಭದಲ್ಲಿ ಪರವಾನಿಗೆ ಭೂಮಾಪನ ತಾಲ್ಲೂಕು ಅಧ್ಯಕ್ಷ ಬಿ.ಟಿ. ವೆಂಕಟೇಶ್, ಶಿವರಾಮರೆಡ್ಡಿ, ದ್ವಾರಕೀಶ್, ರವಿ, ನಾಗರಾಜ್, ವೆಂಕಟೇಶ್, ನಾರಾಯಣಪ್ಪ, ಹರಿಲಾಲ್ ನಾಯಕ್, ಶ್ರೀನಾಥ್, ಮಂಜುಳಾ, ಚಂದ್ರಶೇಖರ್,ತಾದೂರು ರಘು,ಮೇಲೂರು ಮಂಜುನಾಥ್, ಹಾಜರಿದ್ದರು.








