
Sidlaghatta : ಅಡುಗೆ ಅನಿಲದ ಸಿಲಿಂಡರ್ ಗಳಿಗಾಗಿ ಗ್ರಾಹಕರು ಭಾನುವಾರ ಗ್ಯಾಸ್ ಏಜೆನ್ಸಿಯ ಗೋದಾಮು ಬಳಿ ಗಂಟೆ ಗಟ್ಟೆಲೆ ಸರತಿ ಸಾಲಿನಲ್ಲಿ ನಿಂತು ಕಾದರೂ ಕೊನೆಗೂ ಸಿಲಿಂಡರ್ ಸಿಗದೆ ವಾಪಸ್ಸಾಗಬೇಕಾಯಿತು. ಸಿಲಿಂಡರ್ ಸಿಗುತ್ತೋ ಇಲ್ಲವೋ ಎನ್ನುವ ಗೊಂದಲಕ್ಕೆ ಸಮರ್ಪಕ ಉತ್ತರವೂ ಸಿಗದೆ ಗ್ರಾಹಕರು ಪರದಾಡುವಂತಾಯಿತು.
ನಗರದ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದಲ್ಲಿರುವ ಶ್ರೀವೆಂಕಟೇಶ್ವರ ಗ್ಯಾಸ್ ಏಜೆನ್ಸಿಯ ಗೋದಾಮು ಬಳಿ ಬೆಳ್ಳಂಬೆಳಗ್ಗೆಯೆ ನೂರಾರು ಮಂದಿ ಗ್ಯಾಸ್ ಬುಕ್ ಹಿಡಿದು ಸಿಲಿಂಡರ್ ಗಾಗಿ ಸರತಿ ಸಾಲಿನಲ್ಲಿ ನಿಂತು ಬಿಸಿಲು ಗಾಳಿ ಎನ್ನದೆ ಕಾದರಾದರೂ ಸಾಕಷ್ಟು ಮಂದಿಗೆ ಸಿಲಿಂಡರ್ ಸಿಗಲಿಲ್ಲ.
ಇದರಿಂದ ಬೇಸರಗೊಂಡ ಗ್ರಾಹಕರು ಗ್ಯಾಸ್ ಬುಕ್ ಮಾಡಿ ವಾರಹತ್ತು ದಿನಗಳಾಗಿದೆ. ಆದರೂ ಸಿಲಿಂಡರ್ ಸಿಗುತ್ತಿಲ್ಲ. ಸಿಲಿಂಡರ್ ಸಿಗದಿದ್ದರೆ ನಾವು ಮಾಡೋದಾದರೂ ಏನು ? ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸಿಲಿಂಡರ್ ಸಿಗುತ್ತೋ ಇಲ್ಲವೋ, ಸಿಗುವುದಾದರೆ ಯಾವತ್ತು ಸಿಗುತ್ತೆ ಎಂದು ಸ್ಪಷ್ಟವಾಗಿ ಹೇಳುವವರು ಯಾರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಲ್ಕೈದು ದಿನಗಳಿಂದಲೂ ಸಿಲಿಂಡರ್ ಗಾಗಿ ಬಂದು ಬಂದು ಸಿಲಿಂಡರ್ ಸಿಗದೆ ಬರಿ ಗೈಲಿ ವಾಪಸ್ ಹೋಗುತ್ತಿದ್ದೇವೆ, ನಾಳೆ ಸಿಗುತ್ತೆ ಎಂದು ಹೇಳುತ್ತಿದ್ದಾರೆ ಹೊರತು ಸಿಲಿಂಡರ್ ಮಾತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಲಿಂಡರ್ ಗಾಗಿ ನೂರಾರು ಮಂದಿ ಗ್ರಾಹಕರು ಸೇರಿದ್ದ ಕಾರಣ ಗೋದಾಮಿನಿಂದ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದ ಮುಖ್ಯ ರಸ್ತೆಯಲ್ಲೂ ಕ್ಯೂ ಇತ್ತು.
ಹೆಚ್ಚಿನ ಜನರು ಸೇರಿದ್ದ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಜನ ಸಂದಣಿಯನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು. ಗೋದಾಮು ನಿರ್ವಾಹಕರು ನೆರೆದಿದ್ದ ಗ್ರಾಹಕರಲ್ಲಿ ಮನವಿ ಮಾಡಿ, ಯಾರು ಕೂಡ ಗೊಂದಲ ಮಾಡಬೇಡಿ, ಸಿಲಿಂಡರ್ ಬುಕ್ ಮಾಡಿದ ಎಲ್ಲರಿಗೂ ಹಂತ ಹಂತವಾಗಿ ಸಿಲಿಂಡರ್ ವಿತರಿಸುತ್ತೇವೆ ಎಂದರು.
ನಮಗೀಗ ಪ್ರತಿ ದಿನ ಸುಮಾರು 500 ಸಿಲಿಂಡರ್ ಪೂರೈಕೆಯಾಗುತ್ತದೆ. ಆದರೆ ಇದೀಗ ಒಂದು ದಿನಕ್ಕೆ 2-3 ಸಾವಿರ ಮಂದಿ ಬುಕ್ ಮಾಡುತ್ತಾರೆ. ಹಾಗಾಗಿ ಒಂದೇ ದಿನ ಎಲ್ಲರಿಗೂ ಸಿಲಿಂಡರ್ ಪೂರೈಕೆ ಮಾಡುವುದು ಕಷ್ಟ. ಆದರೆ ಬುಕ್ ಮಾಡಿದ ಎಲ್ಲರ ಮನೆಗಳಿಗೂ ನಾವೇ ಸಿಲಿಂಡರ್ ಕಳುಹಿಸಿಕೊಡುತ್ತೇವೆ. ದಯಮಾಡಿ ಹೋಗಿ ಎಂದು ಮನವಿ ಮಾಡಿದರು.
ಆದರೆ ಗ್ರಾಹಕರು ಅಲ್ಲಿಂದ ಕದಲಲು ತಯಾರಿರಲಿಲ್ಲ. ನಾವೇನು ಗಲಾಟೆ ಮಾಡುತ್ತಿಲ್ಲ. ಗೊಂದಲವನ್ನೂ ಮೂಡಿಸುತ್ತಿಲ್ಲ. ನಮ್ಮ ಪಾಡಿಗೆ ನಾವು ಕ್ಯೂನಲ್ಲಿ ನಿಂತಿದ್ದೇವೆ. ನೀವು ಸಿಲಿಂಡರ್ ಕೊಟ್ಟರೆ ನಾವು ಹೋಗುತ್ತೇವೆ ಎಂದು ಪಟ್ಟು ಹಿಡಿದು ಅಲ್ಲಿಂದ ಯಾರೂ ಹೋಗಲಿಲ್ಲ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನಿರೀಕ್ಷಕಿ ವೆಂಕಟಲಕ್ಷ್ಮಮ್ಮ ಇನ್ನಿತರರು ಕೂಡ ಸ್ಥಳದಲ್ಲಿ ಹಾಜರಿದ್ದು ಗ್ರಾಹಕರ ಮನವೊಲಿಸುವ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಕೆಲಸ ಮಾಡಿದರು.