Sidlaghatta : ಕಾರ್ಮಿಕರ ಶೋಷಣೆ ಮತ್ತು ದುಸ್ಥಿತಿ ಕಾಲಾನುಗತಿಯಾಗಿ ರೂಪಾಂತರಗೊಂಡು ಬಂದಿದ್ದು, ಇಂದು ಕಾರ್ಮಿಕರಿಗೆ ಸಲ್ಲಬೇಕಾದ ಹಕ್ಕುಗಳು ಹಾಗೂ ಸೌಲಭ್ಯಗಳು ಹದಗೆಡುತ್ತಿವೆ. ತಮ್ಮ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಹೇಳಿದರು.
ಶಿಡ್ಲಘಟ್ಟದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ಸೆಂಟರ್ ಆಫ್ ಟ್ರೇಡ್ ಯೂನಿಯನ್ಸ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆ – ಮೇ ಡೇ ರ್ಯಾಲಿ ಮತ್ತು ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಎಂಟು ಗಂಟೆಯ ಕೆಲಸದ ಅವಧಿ, ಖಾಯಂ ಕೆಲಸದ ಭದ್ರತೆ, ನ್ಯಾಯಸಮ್ಮತ ವೇತನ, ಸಂಘಟನೆ ಕಟ್ಟುವ ಹಕ್ಕು ಮತ್ತು ಮುಷ್ಕರ ಹಕ್ಕುಗಳನ್ನು ಉಳಿಸಿಕೊಳ್ಳುವ ಹೋರಾಟ ಅಗತ್ಯವಾಗಿದೆ. ಕೇಂದ್ರ ಸರ್ಕಾರ 1948ರಿಂದ ಜಾರಿಯಲ್ಲಿದ್ದ ಕಾರ್ಮಿಕ ಕಾಯಿದೆಗಳನ್ನು ಕೇವಲ ನಾಲ್ಕು ಸಂಹಿತೆಗಳಲ್ಲಿಗೆ ಇಳಿಸಿ, ಕಾರ್ಮಿಕರ ಹಕ್ಕುಗಳನ್ನು ಹಿಂಪಡೆಯುವಂತಾಗಿದೆ. ಇದೇ ಕಾರಣಕ್ಕೆ ಮೇ 20ರಂದು ನಡೆಯಲಿರುವ ರಾಜ್ಯಮಟ್ಟದ ಹೋರಾಟದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಅಂಗನವಾಡಿ, ಬಿಸಿಯೂಟ, ಗ್ರಾಮ ಪಂಚಾಯಿತಿ ನೌಕರರು ಈ ಹೋರಾಟಕ್ಕೆ ಶಕ್ತಿಯಿಂದ ಸಜ್ಜಾಗಬೇಕು ಎಂದರು.
ಉಪನ್ಯಾಸಕರ ಸಂಘದ ಅಧ್ಯಕ್ಷ ಫಯಾಜ್ ಮಾತನಾಡಿ, ಮೇ ದಿನವು ಜಗತ್ತಿನ ದುಡಿದು ಜೀವನ ಸಾಗಿಸುವ ಶ್ರಮಿಕರ ಹಕ್ಕುಗಳ ಪ್ರತಿನಿಧಿ ದಿನವಾಗಿದೆ. “ದೇಶ, ಧರ್ಮ, ಭಾಷೆ, ಜಾತಿ ಯಾವುದನ್ನೂ ಮೀರಿ ಕಾರ್ಮಿಕರು ಒಂದಾಗಿ ಸಂಘಟಿತರಾಗಬೇಕು” ಎಂಬ ಸಂದೇಶ ಇಂದು ಹೆಚ್ಚು ಅಗತ್ಯವಾಗಿದೆ. ಜಾಗತೀಕರಣದ ಕಾಲದಲ್ಲಿ ಶ್ರಮಿಕರ ಬಾಳಿನ ಮೇಲೆ ಬಂಡವಾಳಶಾಹಿಯ ದಬ್ಬಾಳಿಕೆ ಹೆಚ್ಚಾಗಿದೆ. ಶೇಕಡಾ 90ರಷ್ಟು ದುಡಿವ ವರ್ಗ ಬೆವರಿನ ಫಲವನ್ನು ಶೇಕಡಾ 10ರಷ್ಟು ಬಂಡವಾಳದಾರರು ಕಬಳಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪಾಪಣ್ಣ, ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಯಶ್ರೀ, ಖಜಾಂಚಿ ಉಮಾ, ಬಿಸಿಯೂಟ ನೌಕರರ ಸಂಘದ ನಾಗರತ್ನ, ಮಂಜುಳ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.