Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ಧರ್ಮರಾಯಸ್ವಾಮಿ ದೌಪದಮ್ಮ ದೇವಿಯ ಹೂವಿನ ಕರಗವನ್ನು ಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಇದು 37ನೇ ವರ್ಷದ ಹೂವಿನ ಕರಗ ಮಹೋತ್ಸವವಾಗಿದ್ದು, ಗ್ರಾಮದ ಜನರ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರೂ ಉತ್ಸವದಲ್ಲಿ ಭಾಗವಹಿಸಿದ್ದರು.
ಮನೆಗಳ ಮುಂದೆ ರಂಗೋಲಿ ಹಾಕಿ, ಕರಗ ಬರುವ ಸಮಯದಲ್ಲಿ ಆರತಿ ಬೆಳಗಿ ಮಲ್ಲಿಗೆ ಹೂ ಅರ್ಪಿಸಿ ಅಮ್ಮನವರ ಆಶೀರ್ವಾದ ಪಡೆದರು.
ವಹ್ನಿಕುಲ ಕ್ಷತ್ರಿಯರ ಸಂಘದಿಂದ ಆಯೋಜಿಸಲಾದ ಈ ಕರಗ ಉತ್ಸವದ ನಿಮಿತ್ತ ದೇವಾಲಯವನ್ನು ಹೂಗಳಿಂದ ಅಲಂಕರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳೆಲ್ಲ ವಿದ್ಯುತ್ ದೀಪಗಳಿಂದ ಬೆಳಗಿದ್ದವು.
ಈ ವರ್ಷದ ಕರಗವನ್ನು ಗಣೇಶ್ ಅವರು ಹೊತ್ತಿದ್ದು, ಅವರು ಕರಗವನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಕರೆದೊಯ್ದು ಮನೆಮನೆಗೆ ಪೂಜೆ ಸ್ವೀಕರಿಸಿದರು. ವಾದ್ಯ ಮೇಳದೊಂದಿಗೆ ವೀರಕುಮಾರರು ಮೆರವಣಿಗೆಯಲ್ಲಿ ಸಾಗಿದರು.
ಕರಗ ಧರಿಸುವ ಪೂಜಾರಿಯನ್ನು ಧಾರ್ಮಿಕ ವಿಧಾನದಂತೆ ಸಿದ್ಧಗೊಳಿಸಲಾಗಿತ್ತು. ವೀರಕುಮಾರರು, ಗೌಡರು, ಘಂಟೆ ಪೂಜಾರರು ಮತ್ತು ಚಾಕರಿದಾರರು ಈ ಉತ್ಸವದಲ್ಲಿ ತಮ್ಮ ಪಾತ್ರವನ್ನು ನಿಭಾಯಿಸಿದರು. ಧರ್ಮರಾಯಸ್ವಾಮಿ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ನಡೆಸಲಾಯಿತು.
ಈKaraga ಉತ್ಸವದ ಭಾಗವಾಗಿ ಆರ್ಕೆಸ್ಟ್ರಾ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಶಾಸಕ ಬಿ.ಎನ್. ರವಿಕುಮಾರ್, ಮಾಜಿ ಶಾಸಕರಾದ ವಿ. ಮುನಿಯಪ್ಪ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ. ಸುರೇಂದ್ರಗೌಡ, ಹಾಗೂ ವಿವಿಧ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ನಾಯಕರು, ಗ್ರಾಮಸ್ಥರು ಉತ್ಸವದಲ್ಲಿ ಭಾಗವಹಿಸಿದರು.