Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀ ಉಮಾ ಮಹೇಶ್ವರಸ್ವಾಮಿ, ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಬುಧವಾರ ಭಕ್ತಿಭಾವದಿಂದ ಆಚರಿಸಲಾಯಿತು.
ಮೇಳೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ವಿಶೇಷ ಪೂಜೆಗಳಲ್ಲಿ ತೊಡಗಿದ್ದು ದೇವರ ಕೃಪೆಗೆ ಪಾತ್ರರಾಗಿದ್ದರು. ಈ ಮಹೋತ್ಸವದ ಅಂಗವಾಗಿ ಸೋಮವಾರದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಅಕ್ಷಯ ತೃತೀಯದಂದು ಪ್ರಮುಖ ಪೂಜಾ ವಿಧಿಗಳು ನೆರವೇರಿಸಲಾಯಿತು.
ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಪೀಠ ಸಂಸ್ಕಾರ, ಅಷ್ಟಬಂಧನ, ವಿಗ್ರಹ ಪ್ರತಿಷ್ಠೆ, ಮಹಾರುದ್ರಾಭಿಷೇಕ, ವಸ್ತ್ರ ಹಾಗೂ ಹೂವಿನ ಅಲಂಕಾರ, ನೂತನ ಶಿಖರ ಕಲಶಾರೋಹಣ, ಕುಂಭಾಭಿಷೇಕ ಮತ್ತು ದ್ವಜಸ್ತಂಭ ಲೋಕಾರ್ಪಣೆ ನೆರವೇರಿತು.
ಹೋಮ ಹವನಗಳು, ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಭಕ್ತರಿಗಾಗಿ ಉಚಿತ ಅನ್ನ ಸಂತರ್ಪಣೆಯ ವ್ಯವಸ್ಥೆಯೂ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕ ಅಭಿಲಾಷ್ ಶಾಸ್ತ್ರಿ, ಮಲ್ಲಿಕಾರ್ಜುನ್, ಭಾಸ್ಕರ್, ಪುಟ್ಟರುದ್ರಪ್ಪ ಕುಟುಂಬದವರು, ಆರ್.ಎ. ಉಮೇಶ್, ಸುದರ್ಶನ್, ಗೋಪಾಲರೆಡ್ಡಿ, ರೂಪೇಶ್, ರಾಮಕೃಷ್ಣಪ್ಪ, ಅಶ್ವತ್ಥಪ್ಪ, ರಮೇಶ್, ಎನ್ಎಲ್ಎನ್. ಮೂರ್ತಿ, ಶ್ರೀನಿವಾಸಮೂರ್ತಿ ಸೇರಿದಂತೆ ಮೇಲೂರು ಮತ್ತು ಸುತ್ತಮುತ್ತಲಿನ ಸಾವಿರಾರು ಭಕ್ತರು ಭಾಗವಹಿಸಿದ್ದರು.