
Sidlaghatta : ಶಿಡ್ಲಘಟ್ಟದ ನಗರಸಭೆಯಿಂದ ನಿವೇಶನದ ಹಕ್ಕುಪತ್ರ ಪಡೆದುಕೊಂಡಿರುವ ಫಲಾನುಭವಿಗಳು ನಿವೇಶನಕ್ಕಾಗಿ ಪರದಾಡುವಂತೆ ಆಗಿದೆ.
ಸುಮಾರು 20 ವರ್ಷಗಳ ಹಿಂದೆ ನಗರಸಭೆಯಿಂದಲೇ ಹಕ್ಕುಪತ್ರಗಳನ್ನು ನೀಡಲಾಗಿದೆಯಾದರೂ ಫಲಾನುಭವಿಗಳಿಗೆ ಇದುವರೆಗೆ ನಿವೇಶನ ಪಡೆಯಲು ಸಾಧ್ಯವಿಲ್ಲದಂತಾಗಿದೆ. ಅವರುಗಳು ಹತ್ತು ಹಲವು ಬಾರಿ ಹಿಂದಿನ ಪುರಸಭೆ ಹಾಗೂ ಈಗಿನ ನಗರಸಭೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಸುಸ್ತಾಗಿದ್ದಾರೆ.
ನಗರಸಭೆಯಿಂದ ಪಡೆದುಕೊಂಡಿರುವ ಹಕ್ಕುಪತ್ರ ಗಳನ್ನು ತೆಗೆದುಕೊಂಡು ನಿವೇಶನ ಪಡೆಯಲು ಹೋದರೆ ಅಲ್ಲಿ ಖಾಸಗಿ ವ್ಯಕ್ತಿಗಳು ಇದು ನಮಗೆ ಸೇರಿದ ಜಾಗ ಎಂದು ಗಲಾಟೆ ಮಾಡುತ್ತಿದ್ದಾರೆ, ಯಾವುದೇ ರೀತಿಯ ಪ್ರಯೋಜನವಿಲ್ಲ, ನಮ್ಮಂತವರ ಬಡವರೊಂದಿಗೆ ಏಕೆ ಈ ರೀತಿ ಚೆಲ್ಲಾಟ ಎಂದು ಫಲಾನುಭವಿಗಳು ಪ್ರಶ್ನಿಸಿದರು.
ವಿ. ಮುನಿಯಪ್ಪ ಅವರು ಶಾಸಕರಾಗಿದ್ದ ಅವಧಿದಲ್ಲಿ ನಗರಸಭೆಯಲ್ಲಿ ನಂದ ಮುನಿಕೃಷ್ಣಪ್ಪ ಅವರು ಅಧ್ಯಕ್ಷರಾಗಿದ್ದಾಗ ಬಡವರಿಗೆ ನಿವೇಶನ ನೀಡುವ ಸಲುವಾಗಿ ಹಕ್ಕುಪತ್ರಗಳನ್ನು ನೀಡಲಾಗಿದೆ. ಆದರೆ ಅಧಿಕಾರಿಗಳ ಕಿತಾಪತಿಗಳಿಂದ, ನಾವು ಇವತ್ತು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತೆ ಆಗಿದೆ, ನಮ್ಮ ನಿವೇಶನಗಳನ್ನು ಆಕ್ರಮಿಸಿಕೊಂಡಿರುವವರನ್ನು ತೆರವುಗೊಳಿಸಿಕೊಡಿ ಎಂದು ಮನವಿ ಮಾಡಿದರು.
ಈ ನಗರಸಭೆಯ ನಿವೇಶನಗಳ ಕುರಿತಾಗಿ ತನಿಖೆ ನಡೆಸಿದರೆ ಅನೇಕ ಹಗರಣಗಳು ಹೊರಬರುತ್ತವೆ, ಹಲವು ಪ್ರಭಾವಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದರು.
ನಗರಸಭೆಯಿಂದ ಹಾಕಿರುವ ನಾಮಫಲಕವನ್ನು ಸಹ ಖಾಸಗಿ ವ್ಯಕ್ತಿ ತೆರುಗೊಳಿಸಿದ್ದಾರೆ. ಹೀಗಿರುವಾಗ ನಮಗೆ ನಿವೇಶನ ಪಡೆಯಲು ಸಾಧ್ಯವೇ ಎಂದು ಫಲಾನುಭವಿಗಳು ನಗರ ಸಭೆಯ ಪೌರಾಯುಕ್ತೆ ಅಮೃತ ಅವರನ್ನು ಪ್ರಶ್ನಿಸಿದರು.
ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿದ ಪೌರಾಯುಕ್ತೆ ಅಮೃತ, ನಮಗೆ ನೀವುಗಳು ಮತ್ತೊಮ್ಮೆ ಒಂದು ಮನವಿ ಪತ್ರವನ್ನು ನೀಡಿ, ಅದನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ, ಅವರ ಸಲಹೆ ಸೂಚನೆಗಳ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಟೇಲರ್ ನಾರಾಯಣಸ್ವಾಮಿ, ಛಾಯಾದೇವಿ, ಗಂಗಾಧರ್, ಜಯಮ್ಮ, ಕದಿರಮ್ಮ ಹಾಜರಿದ್ದರು.