Sugaturu, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ನವವಿವಾಹಿತ ಮಹಿಳೆಯರಲ್ಲಿ ಕಂಡುಬರುತ್ತಿರುವ ಸಂತಾನಾಭಿವೃದ್ಧಿ ಸಮಸ್ಯೆ ಹಾಗೂ ಆರೋಗ್ಯ ಏರುಪೇರುಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದನ್ವಯ ರಚಿಸಲಾಗಿದ್ದ ಉನ್ನತ ಮಟ್ಟದ ಪರಿಣಿತ ವೈದ್ಯರ ತನಿಖಾ ತಂಡವು ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರು, ನವವಿವಾಹಿತರು, ನೌಕರರು ಮತ್ತಿತರರಿಂದ ಮಹತ್ವದ ಮಾಹಿತಿ ಸಂಗ್ರಹಿಸಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಅವರ ಪತ್ರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸೂಚನೆಯ ಮೇರೆಗೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತನಿಖಾ ಸಮಿತಿಯನ್ನು ರಚಿಸಿದ್ದರು.
ಗ್ರಾಮಕ್ಕೆ ಭೇಟಿ ನೀಡಿದ ಪರಿಣಿತ ವೈದ್ಯರ ತಂಡ: ಶುಕ್ರವಾರ ಸುಗಟೂರು ಗ್ರಾಮಕ್ಕೆ ಭೇಟಿ ನೀಡಿದ ಸಮಿತಿಯಲ್ಲಿ ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಸ್ತ್ರೀ ರೋಗ ತಜ್ಞೆ ಡಾ. ಧರಣಿ, ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞೆ ಡಾ. ಸೌಜನ್ಯ ಎಸ್. ವಾಲೇಕರ್, ಮುದ್ದೇನಹಳ್ಳಿಯ ಶ್ರೀ ಮಧುಸೂದನ್ ಸಾಯಿ ಆಸ್ಪತ್ರೆ,ಯ ಕಮ್ಯುನಿಟಿ ಮೆಡಿಸಿನ್ ತಜ್ಞ ಡಾ. ಯೋಗೇಂದ್ರ, ಚಿಕ್ಕಬಳ್ಳಾಪುರ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಸಂತೋಷ್ ಬಾಬು. ಜಿ.ವಿ. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಪ್ರಕಾಶ್ ಎಂ. ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ದೇವರಾಜ್ , ಶಿಡ್ಲಘಟ್ಟ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ನಂದಿನಿ ಇದ್ದರು.
ಮಾಹಿತಿ ಸಂಗ್ರಹ ಮತ್ತು ಪರಿಶೀಲನೆ: ತಂಡದ ಅಧಿಕಾರಿಗಳು ಗ್ರಾಮದ ಜನಪ್ರತಿನಿಧಿಗಳು, ಮಹಿಳೆಯರು ಹಾಗೂ ಸ್ಥಳೀಯ ಸಾರ್ವಜನಿಕರನ್ನು ಖುದ್ದಾಗಿ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದರು. ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ (2023-24, 2024-25 ಮತ್ತು 2025-26) ಅರ್ಹ ದಂಪತಿಗಳು, ಗರ್ಭಿಣಿಯರ ದಾಖಲಾತಿ, ಇತ್ತೀಚೆಗೆ ಮದುವೆಯಾದವರ ವಿವರ, ಪ್ರೈಮರಿ ಇನ್ ಫರ್ಟಿಲಿಟಿ ಹಾಗೂ ಗರ್ಭಪಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವರವಾದ ಹಿಸ್ಟರಿ ಮತ್ತು ಅಂಕಿ-ಅಂಶಗಳ ಲೈನ್ ಲಿಸ್ಟ್ ಅನ್ನು ಪರಿಶೀಲಿಸಿ ನಿಖರವಾದ ಮಾಹಿತಿ ಕ್ರೋಡೀಕರಿಸಿದರು. ಕೂಡಲೇ ಹಿರಿಯ ಅಧಿಕಾರಿಗಳಿಗೆ ವೈದ್ಯರ ತಂಡವು ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಸರ್ಕಾರಿ ಶಾಲೆಗೆ ಭೇಟಿ – ಮೆಚ್ಚುಗೆ: ಇದೇ ಸಂದರ್ಭದಲ್ಲಿ ವೈದ್ಯಾಧಿಕಾರಿಗಳ ತಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಶಾಲಾ ಆವರಣದಲ್ಲಿ ನೀರು ನಿಂತು ಡೆಂಗೆಯಂತಹ ಕಾಯಿಲೆಗಳನ್ನು ತರಬಲ್ಲ ಯಾವುದೇ ಸೂಚನೆಗಳು ಕಾಣದಿರುವುದನ್ನು ಖಾತ್ರಿಮಾಡಿಕೊಳ್ಳಲಾಯಿತು. ಶಾಲಾ ಆವರಣದಲ್ಲಿ ಕಾಪಾಡಿಕೊಂಡಿರುವ ಅತ್ಯುತ್ತಮ ಸ್ವಚ್ಛತೆ, ಶಿಸ್ತು ಹಾಗೂ ಸುಂದರ ಹಸಿರು ಪರಿಸರವನ್ನು ವೀಕ್ಷಿಸಿದ ಅಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶೀಘ್ರದಲ್ಲೇ ಆರೋಗ್ಯ ಶಿಬಿರದ ಭರವಸೆ: ಗ್ರಾಮಸ್ಥರ ಆರೋಗ್ಯ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿರುವ ವೈದ್ಯರ ತಂಡ, ಶೀಘ್ರದಲ್ಲೇ ಸುಗಟೂರು ಗ್ರಾಮದಲ್ಲಿ ಸ್ತ್ರೀರೋಗ ಹಾಗೂ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ವಿಶೇಷ ತಜ್ಞ ವೈದ್ಯರನ್ನೊಳಗೊಂಡ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ಜಾಗೃತಿ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ದೇವರಾಜು, ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಜಂಗಮಕೋಟೆ ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯ ಡಾ.ಶ್ರೀಹರಿ, ಆರೋಗ್ಯ ಇಲಾಖೆಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎನ್.ಆಶಾ, ಆಶಾ ಕಾರ್ಯಕರ್ತೆಯರಾದ ಲಕ್ಷ್ಮಿ, ಭಾಗ್ಯಮ್ಮ ಹಾಜರಿದ್ದರು.








