ತಂದೆ ತಾಯಿಯನ್ನು ಗೌರವದಿಂದ ಕಾಣುವವರು ಸಾಧಕರಾಗಿ ಸಮಾಜದ ಗೌರವಕ್ಕೆ ಪಾತ್ರರಾಗುತ್ತಾರೆಂದು ಜಿಲ್ಲೆಯ ಚಿಂತಾಮಣಿ ನಗರದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ನರಸಪ್ಪ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಜಿಲ್ಲಾ ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪದ್ಮಶಾಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಟಿವಿ, ಮೊಬೈಲ್ ಗೆ ಅಂಟಿಕೊಂಡರೆ ವಿದ್ಯಾರ್ಥಿಗಳ ಬದುಕು ಖಂಡಿತ ಉಧ್ಧಾರ ಆಗುವುದಿಲ್ಲ. ವಿದ್ಯಾಭ್ಯಾಸಕ್ಕೆ ಎಷ್ಟು ಬೇಕೋ ಅಷ್ಟು ಸೀಮಿತವಾಗಿ ಮೊಬೈಲ್ ನೋಡಬೇಕು. ಬೇರೆಯವರು ನಿಮ್ಮನ್ನು ಯೂಟೂಬ್ನಲ್ಲಿ ನೋಡುವ ರೀತಿ ಸಾಧಕರಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಮೊಬೈಲ್ಗಳು ಹಾದಿ ತಪ್ಪಿಸುತ್ತಿವೆ ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿ ಕ್ಷೇತ್ರದಲ್ಲಿಯು ಸ್ಪರ್ಧೆ ಇದ್ದು, ಗುಣಮಟ್ಟದ ಶಿಕ್ಷಣಕ್ಕೆ, ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಆದ್ಯತೆ ನೀಡಬೇಕೆಂದರು. ಯಾವುದೇ ಸಾಧನೆ ಮಾಡಬೇಕಾದರೆ ಗುರು ಹಿರಿಯರ, ಪೋಷಕರ ಆರ್ಶೀವಾದ ಬಹಳ ಮುಖ್ಯ. ಸಂಕಲ್ಪ ತೊಟ್ಟರೆ ಯಾವುದೇ ಕಾರ್ಯವನ್ನು ನಾವು ಸಿದ್ದಿಸಿಕೊಳ್ಳಬಹುದೆಂದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದಂತೆ ಯಾರು ತಲೆ ಬಗ್ಗಿಸಿ ಓದುತ್ತಾರೆ, ಅವರು ಜಗತ್ತಿನಲ್ಲಿ ತಲೆ ಎತ್ತಿ ನಡೆಯುವಂತೆ ಮಾಡುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷರಾದ ಶ್ರೀನಿವಾಸ ಮೂರ್ತಿ ವಹಿಸಿದ್ದರು.
ಈ ವೇಳೆ 24-25ನೇ ಸಾಲಿನ ಎಸ್,ಎಸ್, ಎಲ್ , ಸಿ ಮತ್ತು ಪಿಯುಸಿಯಲ್ಲಿ 80 ಶೇಕಡ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಪದ್ಮಶಾಲಿ ನೌಕರರ ಸ್ವಯಂ ಸೇವಾ ಬಳಗದಿಂದ ಸೂರ್ಯ ಪ್ರಕಾಶ್ ಮತ್ತು ಜಯಮ್ಮನವರಿಗೆ ಆರ್ಥಿಕ ಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲೂಕು ಪದ್ಮಶಾಲಿ ಸಂಘದ ಅಧ್ಯಕ್ಷರಾದ ನಾಗರಾಜ್, ಕಾರ್ಯದರ್ಶಿ ಅಮರನಾಥ್, ಕಾರ್ಯಕಾರಿ ಬಳಗದ ರೆಡ್ಡಿ ರಮೇಶ್, ಗೋಪಾಲ, ರಘುನಾಥ್, ಶಂಕರ್ ಕುಮಾರ್, ಚಿಂತಾಮಣಿಯ ನಾಗರಾಜ್, ಕೇಶವ ಮೂರ್ತಿ ಉಪಸ್ಥಿತರಿದ್ದರು.







