Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಅಗಲೀಕರಣಕ್ಕೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸಾದಲಿ-ಪೆರೇಸಂದ್ರ ಮಾರ್ಗದ ಜಿಲ್ಲಾ ಮುಖ್ಯರಸ್ತೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4.2 ಕಿ.ಮೀ ರಸ್ತೆ ಅಭಿವೃದ್ಧಿಗಾಗಿ 11 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿ ವಿಶೇಷ ಅನುದಾನದಡಿ ಬಿಡುಗಡೆಗೊಳಿಸಲು ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.
ಸಾದಲಿ ಹೊಸ ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಜಿ.ವಿ. ತಿಮ್ಮರಾಜು ಮಾತನಾಡಿ, “ಸಾದಲಿ ಮುಖ್ಯ ರಸ್ತೆ ಜಿಲ್ಲಾ ಮುಖ್ಯರಸ್ತೆಗೆ ಒಳಪಟ್ಟಿದ್ದು, ಇದರ ಕೆಲ ಭಾಗ ಶಿಡ್ಲಘಟ್ಟ ವ್ಯಾಪ್ತಿಗೆ ಸೇರಿದೆ. ಈ ರಸ್ತೆ ಈಗಿನ ಪರಿಸ್ಥಿಯಲ್ಲಿ ತುಂಬಾ ಕಿರಿದಾಗಿದೆ. ಇದನ್ನು 42*42 ಅಡಿ ಅಗಲೀಕರಿಸಲು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳದೆ ಕಾಲ ಹರಣ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರೂ ಕೂಡ ಶಾಶ್ವತ ಪರಿಹಾರ ನೀಡದೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಪರಿಣಾಮ, ವಾಹನ ಸಂಚಾರ ದುಸ್ತರಗೊಂಡಿದ್ದು, ಚಿಂತಾಮಣಿ-ಬಾಗೇಪಲ್ಲಿ ರಾಜ್ಯ ಹೆದ್ದಾರಿ (234) ಮೂಲಕ ಬಸ್, ಟೆಂಪೋ ಹಾಗೂ ಇತರೆ ವಾಹನಗಳು ಸಾದಲಿ ಶೀಥಲೀಕರಣ ಕೇಂದ್ರದ ಬಳಿ ನಿಲ್ಲಿಸಿ, ಪ್ರಯಾಣಿಕರು ಸುಮಾರು 1 ಕಿ.ಮೀ ದೂರ ಹಿಂತಿರುಗಿ ಓಡಾಡಬೇಕಾಗುತ್ತಿರುವ ದುಸ್ಥಿತಿ ನಿರ್ಮಾಣವಾಗಿದೆ” ಎಂದು ವಿಷಾದಿಸಿದರು.
ಅನುದಾನ ಸಂಪೂರ್ಣವಾಗಿ ಬಿಡುಗಡೆಯಾಗಿಲ್ಲದೆ ಚರಂಡಿ ನಿರ್ಮಾಣವೂ ಅವೈಜ್ಞಾನಿಕವಾಗಿದೆ ಎಂದು ಅವರು ಆರೋಪಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು ಸ್ಪಷ್ಟ ಉತ್ತರ ನೀಡುವವರೆಗೆ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಧರಣಿಯಲ್ಲಿ ಎನ್.ವಿ. ಶ್ರೀನಿವಾಸ್, ನರಸಿಂಹಮೂರ್ತಿ, ಬಾಲು, ಮಂಜುನಾಥ್, ಮಂಜುಳಾ, ಸುರೇಂದ್ರ, ತಿರುಮಲಪ್ಪ, ರಾಮಕೃಷ್ಣಪ್ಪ, ವಿ. ಸುರೇಶ್, ಎ.ಜಿ. ನಾರಾಯಣಸ್ವಾಮಿ, ದಾಸಪ್ಪ, ಮುನಿಯಪ್ಪ, ನರಸಿಂಹಪ್ಪ, ಸುನಿಲ್, ಅಂಜಿನಪ್ಪ ಸೇರಿದಂತೆ ಹಲವಾರು ಗ್ರಾಮಸ್ಥರು ಹಾಗೂ ಮುಖಂಡರು ಭಾಗವಹಿಸಿದರು.
For Daily Updates WhatsApp ‘HI’ to 7406303366
