Sidlaghatta, Chikkaballapur : ಶಿಡ್ಲಘಟ್ಟ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆದ ಮಹತ್ವದ ಸಭೆಯಲ್ಲಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ರೀಲರ್ಗಳು ತಮ್ಮ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತೆ ಹಾಗೂ ನಿರ್ದೇಶಕಿ ವಿನೋತ್ ಪ್ರಿಯಾ ಅವರ ಮುಂದಿಡಿದರು. ಸಭೆಯಲ್ಲಿ ರೀಲರ್ ಅಸೋಸಿಯೇಷನ್ಗಳ ಅಧ್ಯಕ್ಷರು ಹಾಗೂ ಹಲವು ರೀಲರ್ ಮುಖಂಡರು ಭಾಗವಹಿಸಿದ್ದರು.
ರೀಲರ್ಗಳ ಕುಂದುಕೊರತೆಗಳನ್ನು ಆಲಿಸಿದ ಆಯುಕ್ತೆ, ಹಲವಾರು ಬೇಡಿಕೆಗಳಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರೆ, ಕೆಲವು ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಈ ಭರವಸೆಯನ್ನು ಗಮನಿಸಿ, ನವೆಂಬರ್ 24ರಂದು ನಡೆಯಲಿರುವ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರತಿಭಟನೆ ನಡೆಸಬಾರದೆಂದು ಎರಡೂ ಜಿಲ್ಲೆಗಳ ರೀಲರ್ಗಳು ಒಮ್ಮತದಿಂದ ನಿರ್ಧರಿಸಿದ್ದಾರೆ.
ಸಭೆಯಲ್ಲಿ ರೇಷ್ಮೆ ಅಪರ ನಿರ್ದೇಶಕ ವೈ.ಟಿ.ತಿಮ್ಮಯ್ಯ, ರೇಷ್ಮೆ ಜಂಟಿ ನಿರ್ದೇಶಕ ಎನ್.ಮಹಾದೇವಯ್ಯ, ಜಂಟಿ ನಿರ್ದೇಶಕ ಕೆ.ಎನ್.ರವಿ, ಉಪ ನಿರ್ದೇಶಕ ಎನ್.ಉಮೇಶ್, ಸಹಾಯಕ ನಿರ್ದೇಶಕರಾದ ರಾಮ್ ಕುಮಾರ್, ಅಕ್ಮಲ್ ಪಾಷಾ, ಶ್ರೀನಿವಾಸ್ ಗೌಡ, ಉಪ ನಿರ್ದೇಶಕ ನರಸಿಂಹಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರ್ ಮುಖಂಡರಾದ ಫಾರೂಕ್ ಪಾಷಾ, ಜಿ.ರೆಹಮಾನ್, ಅನ್ವರ್, ಆನಂದ್ ಕುಮಾರ್, ಮುನಿಕೃಷ್ಣ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡರು.








