Home News ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ ಪಾರದರ್ಶಕವಾಗಿ ನಡೆಯಲಿದೆ

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ ಪಾರದರ್ಶಕವಾಗಿ ನಡೆಯಲಿದೆ

0
Sidlaghatta SIR Voters Evalutation Training

Sidlaghatta : ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಕಾರ್ಯ(ಎಸ್‌.ಐ.ಆರ್)ವು ಯಾರಿಗೂ ಯಾವುದೆ ರೀತಿಯಲ್ಲಿ ಸಂಶಯಕ್ಕೆ ಎಡೆ ಮಾಡಿಕೊಡದಂತೆ ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಿದ್ದೇವೆ. ಎಲ್ಲರ ಸಹಕಾರದಿಂದ ಎಸ್‌.ಐ.ಆರ್ ಕಾರ್ಯವನ್ನು ಸುಸೂತ್ರವಾಗಿ ನಡೆಸೋಣ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಮತಗಟ್ಟೆ ಅಧಿಕಾರಿ(ಬಿ.ಎಲ್‌.ಒ), ರಾಷ್ಟ್ರೀಯ ರಾಜಕೀಯ ಪಕ್ಷಗಳು ನೇಮಿಸಿರುವ ಬಿ.ಎಲ್‌.ಎ-1 ಹಾಗೂ ಬಿ.ಎಲ್‌.ಎ-2ಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಈ ದೇಶದ ಯಾವೊಬ್ಬ ಅರ್ಹ ಮತದಾರರನ್ನೂ ಮತದಾರರ ಪಟ್ಟಿಯಿಂದ ಕೈ ಬಿಡುವಂತಾಗಬಾರದು. ಹಾಗೆಯೆ ಅನರ್ಹ ಒಬ್ಬರೂ ಕೂಡ ಮತದಾರರ ಪಟ್ಟಿ ಸೇರಬಾರದು ಎಂಬುದೆ ಎಸ್‌.ಐ.ಆರ್ ಕಾರ್ಯದ ಉದ್ದೇಶವಾಗಿದೆ. ಇಲ್ಲಿ ಯಾವುದೆ ಪಕ್ಷ, ಜಾತಿ, ಧರ್ಮದ ತಾರತಮ್ಯ ಇಲ್ಲದೆ ನಿಷ್ಪಕ್ಷಪಾತವಾಗಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿದರು.

ಪ್ರತಿ ಕುಟುಂಬಕ್ಕೂ ನಮ್ಮ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಿ ಈಗಾಗಲೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರಿಗೆ ಅವರ ವಿವರಗಳನ್ನು ನಮೂದಿಸಿರುವ ನಮೂನೆಗಳನ್ನು ನೀಡಿ ಅದರಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿಸಿಕೊಳ್ಳುತ್ತೇವೆ. ಮತದಾರರು ಭೌತಿಕವಾಗಿ ಸ್ಥಳದಲ್ಲಿ ಇಲ್ಲದೆ ನಾನಾ ಕಾರಣಗಳಿಗೆ ಹೊರಗೆ ಇದ್ದರೆ ಕುಟುಂಬದ ಯಾರಾದರೂ ಸರಿ ಮಾಹಿತಿಯನ್ನು ನೀಡಿ ಸಹಿ ಹಾಕಬಹುದು ಎಂದು ವಿವರಿಸಿದರು.

ಎಸ್‌.ಐ.ಆರ್‌ ನಲ್ಲಿ ನಾವು ಹೊಸದಾಗಿ ಮತದಾರರ ಸೇರ್ಪಡೆ ಮಾಡಿಕೊಳ್ಳುವುದಿಲ್ಲ. 2025 ರ ಮತದಾರರ ಅಂತಿಮ ಪಟ್ಟಿಯಂತೆ ಪರಿಷ್ಕರಣೆ ಕಾರ್ಯ ಮಾಡಲಿದ್ದೇವೆ. ಅಂತಿಮ ಮತದಾರರ ಕರಡು ಪಟ್ಟಿ ಪ್ರಕಟಣೆ ಆದ ನಂತರ ತಮ್ಮ ಹಕ್ಕು ಮಂಡಿಸಲು ಮತದಾರರಿಗೆ ಅವಕಾಶವಿದೆ ಎಂದರು.

ಈ ಹಿಂದೆ 2002ರಲ್ಲಿ ಎಸ್‌.ಐ.ಆರ್ ಕಾರ್ಯ ನಡೆದಿತ್ತು. ಆ ನಂತರ ಮತ್ತೆ ಇದೀಗ ನಡೆಯುತ್ತಿದೆ. 2002ಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿರುವವರು ಅವರು ಆಗ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಭಾಗದಲ್ಲಿ ಮತದಾರರಾಗಿದ್ದರು ಎಂಬ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದರು.

ಈಗಾಗಲೆ ಮತದಾರರ, ಕುಟುಂಬವಾರು ಮ್ಯಾಪಿಂಗ್ ಕಾರ್ಯ ಮುಗಿದಿದ್ದು ನಮ್ಮ ಸಿಬ್ಬಂದಿ ಮನೆ ಮನೆಗೂ ಭೇಟಿ ನೀಡಿ ನಮೂನೆಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿಸಿಕೊಳ್ಳಲಿದ್ದು ಈ ವೇಳೆ ಬಿಎಲ್1, ಬಿಎಲ್2 ಸೇರಿದಂತೆ ಸ್ಥಳೀಯರು ಯಾರು ಬೇಕಾದರೂ ಜತೆಗಿರಬಹುದು.

ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಮತದಾರರು ಕೂಡ ಈ ಎಸ್‌.ಐ.ಆರ್ ಕಾರ್ಯದಲ್ಲಿ ಪಾಲ್ಗೊಳ್ಳುವಿಕೆ ಆಗಬೇಕು ಎಂಬುದು ಚುನಾವಣಾ ಆಯೋಗದ ಉದ್ದೇಶ. ಆಗಲೆ ಎಸ್‌.ಐ.ಆರ್ ಕಾರ್ಯವು ಸುಸೂತ್ರವಾಗಿ ನಿಷ್ಪಕ್ಷಪಾತವಾಗಿ ಯಾವುದೆ ರೀತಿಯ ಸಂಶಯ ಇಲ್ಲದಂತೆ ನಡೆಯಲಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ತರಬೇತಿಯಲ್ಲಿ ಭಾಗವಹಿಸಿದ್ದ ಬಿ.ಎಲ್‌.ಒಗಳು, ಬಿ.ಎಲ್‌.ಎ-1, ಬಿಎಲ್‌ಎ-2 ಅವರು ಎಸ್‌.ಐ.ಆರ್ ಕಾರ್ಯ ಕುರಿತು ತಮ್ಮಲ್ಲಿದ್ದ ಅನುಮಾನಗಳ ಬಗ್ಗೆ ಪ್ರಶ್ನೆ ಮಾಡಿ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸಿಕೊಂಡರು. ಇನ್ನೂ ಎರಡು ಮೂರು ಹಂತದಲ್ಲಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಅವರು ಭರವಸೆ ನೀಡಿದರು.

ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂಧಣಾಕಾರಿ ಎಸ್.ಎಸ್.ಅಬೀದ್, ತಹಶೀಲ್ದಾರರು ಹಾಗೂ ಮತದಾರರ ಸಹಾಯಕ ನೋಂದಣಾಧಿಕಾರಿ ಎನ್.ಗಗನಸಿಂಧು, ನಗರಸಭೆ ಪೌರಾಯುಕ್ತೆ ಹಾಗೂ ನಗರ ಮತದಾರರ ಸಹಾಯಕ ನೋಂದಣಾಧಿಕಾರಿ ಜಿ.ಅಮೃತಗೌಡ, ಬಿ.ಎಲ್‌.ಒಗಳು, ಬಿ.ಎಲ್‌.ಎ-1, ಬಿ.ಎಲ್‌.ಎ-2 ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version