Sidlaghatta : ಸಮಾಜದಲ್ಲಿ ಮಠಗಳು ಸಂಸ್ಕಾರ ಬಿತ್ತುವ ಕೇಂದ್ರಗಳಾಗಿವೆ. ಧರ್ಮ ರಕ್ಷಣೆ ಹಾಗೂ ಸಾಮಾಜಿಕ ಕಾಳಜಿಯಿಂದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಪಸರಿಸಬೇಕಾಗಿದೆ ಎಂದು ಸೋದೆ ವಾದಿರಾಜ ಮಠದ ಕಿರಿಯ ಶ್ರೀಗಳಾದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರು ತಿಳಿಸಿದರು.
ನಗರದ ಮುತ್ತೂರು ಬೀದಿಯಲ್ಲಿರುವ ರಾಘವೇಂದ್ರಸ್ವಾಮಿ ಮಠಕ್ಕೆ ಆಗಮಿಸಿದ್ದ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಪರಿಶುದ್ಧ ಭಕ್ತಿ ಸುಖಿ ಜೀವನದ ಮೂಲಾಧಾರ. ಧಾರ್ಮಿಕ ಕೆಂಕರ್ಯಗಳಿಗೆ ಪೂರಕ ಕಾರ್ಯಗಳನ್ನು ಭಕ್ತವಂದ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು. ಶುದ್ಧ ಮನಸ್ಸಿನಿಂದ ಭಕ್ತಿ ಸಮರ್ಪಿಸಿದರೆ ಜೀವನ ಬಂಗಾರವಾಗುತ್ತದೆ. ಭಕ್ತರು ಶುದ್ಧ ಮನಸ್ಸಿನಿಂದ ಅರ್ಪಿಸಿದ ಭಕ್ತಿಯಿಂದ ಭಗವಂತ ಸಂತುಷ್ಟನಾಗುತ್ತಾನೆ ಎಂದು ಹೇಳಿದರು.
ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಕೃಷ್ಣನಿಗೆ ತೊಟ್ಟಿಲು ಪೂಜೆ ಮತ್ತು ಶ್ರೀ ಭೂತರಾಯರ ಪೂಜೆಯನ್ನು ನೆರವೇರಿಸಿ, ಫಲ ಮಂತ್ರಾಕ್ಷತೆಯನ್ನು ವಿತರಿಸಿದರು.
ನಗರಕ್ಕೆ ಆಗಮಿಸಿದ ಶ್ರೀವಿಶ್ವವಲ್ಲಭ ತೀರ್ಥಶ್ರೀಪಾದರನ್ನು ಮಯೂರ ವೃತ್ತದಿಂದ ರಾಘವೇಂದ್ರಸ್ವಾಮಿ ಮಠದ ವರೆಗೆ ಶೋಭಾಯಾತ್ರೆಯ ಮೂಲಕ ವೇದಘೋಷ, ಭಜನೆ, ಸ್ತೋತ್ರ ಪಾರಾಯಣ ಸಹಿತ ಪೂರ್ಣ ಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ಕಾರ್ಯದರ್ಶಿ ಎನ್.ಶ್ರೀಕಾಂತ್, ಖಜಾಂಚಿ ಆರ್.ಮಧುಸೂದನ್, ಸದಸ್ಯರಾದ ಎಂ.ವಾಸುದೇವರಾವ್, ಸುಧೀಂದ್ರ, ವೈಶಾಕ್, ಕೆ.ಮಂಜುನಾಥ್ ಹಾಜರಿದ್ದರು.