Sidlaghatta : ಶಿಡ್ಲಘಟ್ಟ ನಗರದಲ್ಲಿ ಜೂನ್ 7 ರಂದು ಶ್ರೀರಾಮ ಶೋಭಾಯಾತ್ರೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಮಾಜದವರು ಭಾಗವಹಿಸಿ ಶೋಭಾಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ನ ಅಧ್ಯಕ್ಷ ಬಿ.ವೆಂಕಟೇಶ್ ಮನವಿ ಮಾಡಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಬುಧವಾರ ಶ್ರೀರಾಮ ಶೋಭಾಯಾತ್ರೆಯ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ನಗರದ ಹೊರವಲಯದ ದಿಬ್ಬೂರಹಳ್ಳಿ ರಸ್ತೆಯಲ್ಲಿ ಹನುಮಂತಪುರ ಗೇಟ್ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಿಂದ ಜೂನ್ 7 ರಂದು ಬೆಳಗ್ಗೆ 11 ಗಂಟೆಗೆ ಶೋಭಾಯಾತ್ರೆ ಪ್ರಾರಂಭವಾಗಲಿದೆ. ಎಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಶ್ರೀರಾಮಚಂದ್ರರ ಕೃಪೆಗೆ ಪಾತ್ರವಾಗಬೇಕೆಂದು ಕೋರಿದರು.
ಶ್ರೀರಾಮ ಶೋಭಾಯಾತ್ರೆಯ ದಿನದಂದು ಎಲ್ಲಾ ಹಿಂದೂ ಬಾಂಧವರ ಮನೆಯ ಮುಂದೆ ರಂಗೋಲಿ ಹಾಗೂ ಹೂವಿನಿಂದ ಅಲಂಕೃತವಾಗಿರಲಿ. ಮನೆಗೆ ಹಸಿರು ತೋರಣ ಕಟ್ಟಿ, ಭಗವಧ್ವಜ ಕಟ್ಟಿ, ಹಬ್ಬದ ವಾತಾವರಣ ಸೃಷ್ಟಿಯಾಗಲಿ ಎಂದು ಮನವಿ ಮಾಡಿದರು.
ಶಿಡ್ಲಘಟ್ಟ ನಗರದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆಯು ಸಂಚರಿಸಲಿದೆ, ನಾನಾ ಜನಪದ ಕಲಾ ತಂಡಗಳು ಇರಲಿವೆ. 12 ಅಡಿ ಎತ್ತರ ಶ್ರೀಕೋದಂಡರಾಮ ಮೂರ್ತಿ, 6 ಅಡಿ ಎತ್ತರದ ಬಾಲರಾಮನ ವಿಗ್ರಹ, ಕುರುಕ್ಷೇತ್ರ ರಥ ಹನುಮ ವೇಷಧಾರಿಗಳು, ಕೇರಳದ ಚಂಡೆ ವಾಧ್ಯ ಇನ್ನಿತರೆ ಕಲಾತಂಡಗಳು ಶೋಭಾಯಾತ್ರೆಯ ಆಕರ್ಷಣೆಯಾಗಿ ಇರಲಿದೆ ಎಂದರು.
ಶೋಭಾಯಾತ್ರೆ ಮೆರವಣಿಗೆ ನಂತರ ಬಸ್ ನಿಲ್ದಾಣದ ಬಳಿ ವೇದಿಕೆ ಕಾರ್ಯಕ್ರಮವಿರುತ್ತದೆ. ಶ್ರೀರಾಮ ಶೋಭಾಯಾತ್ರೆಯ ಕರಪತ್ರಗಳನ್ನು ಮನೆಮನೆಗೂ ತಲುಪಿಸಲಾಗುವುದು. ಅನೇಕ ಹಳ್ಳಿಗಳಿಂದ ಸ್ವಯಂಪ್ರೇರಿತರಾಗಿ ಪಲ್ಲಕ್ಕಿಗಳನ್ನು ತಂದು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಶ್ರೀರಾಮ ಶೋಭಾಯಾತ್ರೆ ಆಚರಣಾ ಟ್ರಸ್ಟ್ನ ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್.ಜಿ.ಕೆ, ಭರತ್, ರವಿಚಂದ್ರ, ನಾಗೇಶ್, ಲಕ್ಷ್ಮೀಪತಿ, ಕಿರಣ್, ರಾಮಾಂಜಿನೇಯ, ರವೀಂದ್ರನಾಥ್ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಜರಿದ್ದರು.








