
Sidlaghatta : ಶಿಡ್ಲಘಟ್ಟ ನಗರದಲ್ಲಿ ಶನಿವಾರ ರಾತ್ರಿ ರೇಣುಕಾ ಎಲ್ಲಮ್ಮ ದೇವಿ ಹೂವಿನ ಕರಗವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಕ್ತಿ ಆರಾಧನೆಯ ಧ್ಯೋತಕವಾದ ಕರಗವನ್ನು ಆಹ್ವಾನಿಸಲು ಮನೆಗಳ ಮುಂದೆ ಸಾರಿಸಿ ರಂಗೋಲಿಯನ್ನಿಟ್ಟಿದ್ದರು. ಎಲಮ್ಮ ದೇಗುಲದ ಬಳಿ ನೂರಾರು ಭಕ್ತರು, ಪೂಜೆ ಹಾಗೂ ಕರಗ ಹೊರುವುದಕ್ಕೆ ಸಾಕ್ಷಿಯಾದರು. ಪ್ರತಿಯೊಂದು ಬೀದಿ, ಗಲ್ಲಿ, ಪ್ರಮುಖ ರಸ್ತೆಗಳು ಎಲ್ಲವನ್ನೂ ಹಾದು ಬರುವುದು ಈ ಕರಗದ ವಿಶೇಷ. ಹಾಗಾಗಿ ಪ್ರತಿಯೊಬ್ಬ ಮನೆಯವರೂ ಆರತಿ ಎತ್ತಿ, ಮಲ್ಲಿಗೆ ಹೂಗಳನ್ನು ಅರ್ಪಿಸಿ, ತೆಂಗಿನಕಾಯಿ ಒಡೆದು ಪೂಜಿಸಿದರು.
ನಗರದ ಪ್ರಮುಖ ಬೀದಿಗಳನ್ನು ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು. ಸಂಗೀತ ಗೋಷ್ಠಿ ಹಾಗೂ ಆರ್ಕೇಸ್ಟ್ರಾ ಏರ್ಪಡಿಸಲಾಗಿತ್ತು. ಊರಿನ ಶಕ್ತಿ ದೇವತೆಗಳಾದ ಮಾರಮ್ಮ, ಪೂಜಮ್ಮ, ಗಂಗಮ್ಮ ಮೊದಲಾದ ದೇವಾಲಯಗಳನ್ನು ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ಯುಗಾದಿಯ ದಿನ ರಾತ್ರಿ ಹಸಿಕರಗದ ರಚನೆಯೊಂದಿಗೆ ಪ್ರಾರಂಭವಾದ ಕರಗದ ಸಂಪ್ರದಾಯಬದ್ಧವಾದ ಕಾರ್ಯ ಹೂವಿನ ಕರಗದೊಂದಿಗೆ ಮುಕ್ತಾಯಕ್ಕೆ ಬರುತ್ತದೆ. ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮ್ಲಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಿದ್ದರು.
“ಗೋವಿಂದ.. ಗೋವಿಂದ..” ಎಂದು ಕೂಗುತ್ತಾ ಆವೇಷಭರಿತರಾಗಿ ವೀರಕುಮಾರರು ಅಲಗು ಸೇವೆ ಮಾಡುವುದರೊಂದಿಗೆ ಹಲಗೆ, ತಮಟೆ ವಾದ್ಯಗಳ ಸಮೇತ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು.
ಈ ಸಂಪ್ರದಾಯವನ್ನು ಹಿಂದಿನಿಂದ ವಹ್ನಿಕುಲ ಕ್ಷತ್ರಿಯರು ಆಚರಿಸಿಕೊಂಡು ಬಂದಿದ್ದಾರೆ. ಈ ಬಾರಿ ಕರಗವನ್ನು ಪಿ.ಎಂ.ರಮೇಶ್ ಹೊತ್ತಿದ್ದರು.