Sidlaghatta : ಈ ಬಾರಿಯ SSLC ಫಲಿತಾಂಶದಲ್ಲಿ ಶಿಡ್ಲಘಟ್ಟ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಶ್ರೇಷ್ಟ ಸಾಧನೆ ದಾಖಲಿಸಿದೆ. “ಮುಂದಿನ ಬಾರಿ ಶಿಡ್ಲಘಟ್ಟ ಪ್ರಥಮ ಸ್ಥಾನ ಗಳಿಸಬೇಕು ಎಂಬುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಪೂರಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯೊಂದಿಗೆ ಚರ್ಚೆ ನಡೆಸಲಾಗುವುದು,” ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ಅವರು ಶನಿವಾರ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಮಾತನಾಡುತ್ತಿದ್ದರು.
ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ 22ನೇ ಸ್ಥಾನ ಲಭಿಸಿದ್ದು, ಇದನ್ನು ಇನ್ನಷ್ಟು ಉತ್ತಮಗೊಳಿಸುವ ಅಗತ್ಯವಿದೆ. “ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಫಲಿತಾಂಶ ಉನ್ನತವಾಗಬೇಕಾದರೆ, ಪೂರಕ ತರಗತಿಗಳು, ಮಾರ್ಗದರ್ಶನ ಶಿಬಿರಗಳು, ಮತ್ತು ಪರೀಕ್ಷಾ ತಯಾರಿಗಾಗಿ ಮಕ್ಕಳಿಗೆ ತಯಾರಿ ನೀಡುವ ಕಾರ್ಯಕ್ರಮಗಳು ಹಮ್ಮಿಕೊಳ್ಳಬೇಕು,” ಎಂದು ಅವರು ಅಭಿಪ್ರಾಯಪಟ್ಟರು.
ಪೋಷಕರಿಗೆ ಮನವಿ: ಮಕ್ಕಳ ಮೇಲೆ ಅಂಕಗಳ ಒತ್ತಡ ಹಾಕುವ ಬದಲಿಗೆ, ಅವರನ್ನು ಉತ್ತಮ ಶೈಕ್ಷಣಿಕ ಯಶಸ್ಸಿಗೆ ತಯಾರಿಸುವ ಹೊಣೆ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಪ್ರತಿಯೊಬ್ಬರದೂ ಆಗಿದೆ ಎಂದು ಅವರು ಹೇಳಿದರು.
“ಗ್ರಾಮಾಂತರ–ನಗರ ಎಂಬ ಭಿನ್ನತೆ ಇಲ್ಲದೇ, ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಬೇಕು. ಶಿಡ್ಲಘಟ್ಟದಲ್ಲಿ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ,” ಎಂದು ಅವರು ನುಡಿದರು.
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಂಡಿಗನಾಳದ ಎಚ್.ಆರ್. ಜಶ್ವಂತ್ ಯಾದವ್, ದ್ವಿತೀಯ ಸ್ಥಾನ ಪಡೆದ ದೇಶದಪೇಟೆಯ ಎಂ. ಜಾಹ್ನವಿ (ವಾಸವಿ ಶಾಲೆ) ಹಾಗೂ ಮುತ್ತೂರು ಬೀದಿಯ ಬಿ.ಎಸ್. ಪ್ರಣವಿ ಅವರ ಮನೆಗೆ ತೆರಳಿ, ಶಾಸಕರು ಸನ್ಮಾನಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಮುಖಂಡರಾದ ತಾದೂರು ರಘು ಹಾಗೂ ಇತರರು ಉಪಸ್ಥಿತರಿದ್ದರು.