Kondappagarahalli, Sidlaghatta : ಈ ಬಾರಿಯ SSLC ಪರೀಕ್ಷೆಯಲ್ಲಿ ಸರ್ಕಾರಿ ಶಾಲಾ ಮಕ್ಕಳು 625ಕ್ಕೆ 625 ಅಂಕಗಳಿಸಿದರೆ ಅವರಿಗೆ ಒಂದು ಲಕ್ಷ ನಗದು ಹಾಗೂ ಆ ಶಾಲೆಯ ಶಿಕ್ಷಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ಪ್ರಕಟಿಸಿದರು.
ತಾಲ್ಲೂಕಿನ ಕೊಂಡಪ್ಪಗಾರಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ 2026 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ಕಾರ್ಯಗಾರ ಮತ್ತು ಪೂರ್ವ ಸಿದ್ಧತಾ ಪರೀಕ್ಷೆ 1-2 ರ ಫಲಿತಾಂಶ ವಿಶ್ಲೇಷಣೆ ಬಗ್ಗೆ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆಯುತ್ತಾರೋ ಅಷ್ಟು ವಿದ್ಯಾರ್ಥಿಗಳಿಗೂ ತಲಾ ಒಂದು ಲಕ್ಷ ರೂಪಾಯಿಗಳನ್ನು ನಗದು ಬಹುಮಾನವಾಗಿ ನೀಡುತ್ತೇನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶಿಡ್ಲಘಟ್ಟ ಮೂರನೇ ಸ್ಥಾನ ಹಾಗೂ ಕಳೆದ ಬಾರಿ ಎರಡನೆ ಸ್ಥಾನ ಪಡೆದಿತ್ತು. ಈ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸಬೇಕು. ನಾನು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇನೆ. ಈ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಚಿಂತಾಮಣಿಯ ಡಾ.ಎಂ ಸಿ ಸುಧಾಕರ್ ಅವರು ಉತ್ತಮ ವಿದ್ಯಾಭ್ಯಾಸ ಮಾಡಿದ್ದಾರೆ. ಜಿಲ್ಲೆಯ ಶಾಸಕರ ಪೈಕಿ ಕಡಿಮೆ ಓದಿರುವುದು ನಾನೇ. ನಾನು ಓದಿರುವುದು ಕೇವಲ 7ನೇ ತರಗತಿ. ನಾನು ಪಡೆಯದ ಶಿಕ್ಷಣವನ್ನು ಈ ಕ್ಷೇತ್ರದ ಎಲ್ಲಾ ಮಕ್ಕಳು ಪಡೆಯಬೇಕು. ನನ್ನಂತೆ ಯಾರು ಪಶ್ಚಾತಾಪ ಪಡಬಾರದು ಎಂಬ ಆಸೆ ನನ್ನದು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಮೇಶ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯು ಈ ಹಿಂದೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಗಳಿಸಿದೆ. ಕಳೆದ ಬಾರಿ 22ನೇ ಸ್ಥಾನವನ್ನು ಪಡೆದುಕೊಂಡು ಬಾರಿ ಹಿನ್ನಡೆಯನ್ನು ಅನುಭವಿಸಿದೆ. ಹಾಗಾಗಿ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯು ಕನಿಷ್ಠ 10 ಒಳಗೆ 8, 7, 6 ನೇ ಸ್ಥಾನಗಳಿಗೆ ಕೊಂಡಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯು ಶೇಕಡಾ 95, 96 ರಷ್ಟು ಫಲಿತಾಂಶ ಬರಬೇಕು ಎನ್ನುವ ಗುರಿಯನ್ನು ಹೊಂದಿರಬೇಕು. ಶಿಡ್ಲಘಟ್ಟ ಕ್ಷೇತ್ರದಲ್ಲಿ ಶಾಸಕರು ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ ವಹಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ನೀವು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಶೇಕಡಾ100 ರಷ್ಟು ಫಲಿತಾಂಶ ನೀಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರ ಕುಮಾರ್,ಇಸಿಒ ಮಂಜುನಾಥ್, ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ವಿಷಯ ಪರಿವೀಕ್ಷಕ ಆಂಜಿನಪ್ಪ, ಬಿ.ಆರ್.ಸಿ. ಪ್ರಸನ್ನ ಕುಮಾರ್, ಎಲ್.ವಿ. ವೆಂಕಟರೆಡ್ಡಿ ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಹಾಜರಿದ್ದರು.








