ತಾಲ್ಲೂಕು ಟೈಲರ್ಸ್ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ಕಾಳಿಕಾಂಬ ಕಮಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಟೈಲರ್ಸ್ ದಿನಾಚರಣೆ ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಟೈಲರ್ ವರ್ಗದವರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ಆರ್. ವರಲಕ್ಷ್ಮಿ ಮಾತನಾಡಿದರು.
ಅಸಂಘಟಿತ ವಲಯದ ವ್ಯಾಪ್ತಿಗೆ ಬರುವ ಟೈಲರುಗಳಿಗೆ ಸರ್ಕಾರದ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್ ಕಾರ್ಡ್ ನೀಡಲು ಕ್ರಮಕೈಗೊಂಡಿದೆ. ಇದರೊಂದಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ವಿಶೇಷ ಸಾಧನೆ ಮಾಡಿದ ಕಾರ್ಮಿಕರನ್ನು ಗುರುತಿಸಿ, ಕಾರ್ಮಿಕರಿಗೆ “ಶ್ರಮ ಸಮ್ಮಾನ ಪ್ರಶಸ್ತಿ” ಹಾಗೂ “ವಿಶೇಷ ಪುರಸ್ಕಾರ” ನೀಡಲಾಗುತ್ತಿದೆ. ಶ್ರಮ ಸಮ್ಮಾನ ಪ್ರಶಸ್ತಿಯು 10 ಸಾವಿರ ರೂಗಳ ನಗದು ಮೌಲ್ಯ, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ ಒಳಗೊಂಡಿದೆ ಮತ್ತು ವಿಶೇಷ ಪುರಸ್ಕಾರವು ಒಂದು ಸಾವಿರ ರೂಗಳ ನಗದು ಮೌಲ್ಯ, ಸ್ಮರಣಿಕೆ ಹಾಗೂ ಪ್ರಶಂಸಾಪತ್ರ ಒಳಗೊಂಡಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಠಿಯಿಂದ ವಂತಿಕೆ ಆಧಾರಿತ ಭವಿಷ್ಯನಿಧಿ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿ ಕೆಲಸ ಮಾಡುತ್ತಿರುವ ಟೈಲರ್ಗಳ ಸಂಖ್ಯೆ ಹೆಚ್ಚಿದೆ. ಟೈಲರುಗಳಲ್ಲಿ ಮಹಿಳೆಯರೇ ಹೆಚ್ಚು. ಸರ್ಕಾರವು ಟೈಲರುಗಳು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಸವಲತ್ತು ಗಳನ್ನು ಒದಗಿಸಿಕೊಡಬೇಕೆಂದು ಹೇಳಿದರು.
ಟೈಲರ್ಸ್ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಆರ್.ರಮಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಎಸ್.ಎಫ್.ಸಿ.ಎಸ್. ಅಧ್ಯಕ್ಷ ಬಿ.ನಾರಾಯಣಸ್ವಾಮಿ ಹಾಜರಿದ್ದರು.