Talakayalabetta, Sidlaghatta : ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಾರ್ಲಹಳ್ಳಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೆಂಕಟಪ್ಪ ಜಮೀನಿನಿಂದ ರಾಜಪ್ಪ ಜಮೀನಿನವರೆಗಿನ ಕಾಲುವೆ ಅಭಿವೃದ್ಧಿ ಕಾಮಗಾರಿಯ ಸ್ಥಳದಲ್ಲಿ “ದುಡಿಯೋಣ ಬಾ” ಅಭಿಯಾನವನ್ನು ಮಂಗಳವಾರ ಹಮ್ಮಿಕೊಳ್ಳಲಾಯಿತು.
ತಲಕಾಯಲಬೆಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿ. ಶ್ರೀನಿವಾಸ ಮಾತನಾಡಿ, ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ “ದುಡಿಯೋಣ ಬಾ” ಮತ್ತು “ಸ್ತ್ರೀ ಚೇತನ” ಅಭಿಯಾನಗಳ ಪ್ರಾಥಮಿಕ ಉದ್ದೇಶ ಮಹಿಳಾ ಭಾಗವಹಿಸುವಿಕೆಯನ್ನು ಉತ್ತೇಜಿಸುವುದಾಗಿದೆ.
ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಗರ್ಭಿಣಿಯರಿಗೆ ಕೆಲಸದಲ್ಲಿ ನೀಡಲಾಗುವ ರಿಯಾಯಿತಿಗಳ ಬಗ್ಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯು ಗ್ರಾಮೀಣ ಅಭಿವೃದ್ಧಿಗೆ ಮಹತ್ವವಾಗಿದ್ದು, ಸಾಮಾನ್ಯ ರೈತರ ಮತ್ತು ಕೂಲಿ ಕಾರ್ಮಿಕರ ಬದುಕಿಗೆ ಭದ್ರತೆ ನೀಡುತ್ತದೆ. ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ನರೇಗಾ ಸಂಯೋಜಕ ಲೋಕೇಶ್ ಹೇಳಿದರು.
ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡುವ ಫಲಾನುಭವಿಗಳಿಗೆ ಈಗ ದಿನಕ್ಕೆ 370 ರೂ. ವೇತನ ಹೆಚ್ಚಳವಾಗಿರುವುದಾಗಿ ತಿಳಿಸಲಾಯಿತು. ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ವೈಯಕ್ತಿಕ ಹಾಗೂ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಕಾಮಗಾರಿಗಳನ್ನು ಪಡೆಯಬಹುದು. ಒಂದು ಜಾಬ್ ಕಾರ್ಡ್ನಿಂದ ಸುಮಾರು 5 ಲಕ್ಷ ರೂಪಾಯಿಗಳ ಮೌಲ್ಯದ ಕಾಮಗಾರಿಗಳನ್ನು ಸದುಪಯೋಗ ಪಡಿಸಿಕೊಳ್ಳಬಹುದೆಂದು ತಿಳಿಸಿದರು
ತಾಲ್ಲೂಕು ನರೇಗಾ ಐಇಸಿ ಸಂಯೋಜಕ ಲೋಕೇಶ್, ಎಂಜಿನಿಯರ್ ಹರಿನಾಥ್, ಬಿ.ಎಫ್.ಟಿ ಗಂಗರಾಜು, ಸ್ಥಳೀಯ ಕೂಲಿ ಕಾರ್ಮಿಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.